*ಗೋಣಿಕೊಪ್ಪಲು, ಮೇ 9: ಸ್ನೇಹಿತನ ಮದುವೆಗೆ ತೆರಳುತ್ತಿದ್ದ ಸಂದರ್ಭ ಬೈಕ್ ಅಪಘಾತಕ್ಕೀಡಾಗಿ ಹಿಂಬದಿ ಸವಾರ ಸಾವನಪ್ಪಿದ ಘಟನೆ ನಡೆದಿದೆ. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.ಹಾತೂರು ಗ್ರಾಮದ ನಿವಾಸಿ ಕೊಕ್ಕಂಡ ಸೋಮಯ್ಯ ಅವರ ಪುತ್ರ ಕೌಶಿಕ್ ಮುತ್ತಪ್ಪ (21) ಮೃತಪಟ್ಟ ದುರ್ದೈವಿ. ಕೇರಳದ ವಿಷ್ಣು ಶಾಯೆಲ್ (22) ಗಂಭೀರ ಗಾಯಗಳಿಂದ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.ಹಳ್ಳಿಗಟ್ಟು ಸಿ.ಐ.ಟಿ. ಕಾಲೇಜಿನ ವಿದ್ಯಾರ್ಥಿಗಳಾದ ಇವರು, ಸೋಮವಾರ ರಾತ್ರಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ತಮ್ಮ ಸ್ನೇಹಿತನ ಮದುವೆಗೆ ತೆರಳುತ್ತಿದ್ದಾಗ, ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಸಮೀಪದ ನೋ ಎಂಟ್ರಿ ಬೋರ್ಡ್‍ಗೆ ರಾಯನ್ ಎನ್‍ಫೀಲ್ಡ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೌಶಿಕ್‍ನ ತಲೆಯ ಭಾಗಕ್ಕೆ ಪೆಟ್ಟು ಬಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

(ಮೊದಲ ಪುಟದಿಂದ) ವಿಷ್ಣು ಶಾಯೆಲ್‍ಗೆ ಸಂಬಂಧಿಸಿದ ರಾಯಲ್ ಎನ್‍ಫೀಲ್ಡ್ ಬೈಕ್ ಇದಾಗಿದ್ದು, ಅತೀ ವೇಗದಿಂದ ವಿಷ್ಣು ಬೈಕ್ ಚಾಲನೆ ಮಾಡುತ್ತಿದ್ದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಮನೆಯಲ್ಲೆ ಇದ್ದ ಕೌಶಿಕ್‍ನನ್ನು ರಾತ್ರಿ 10 ಗಂಟೆ ಸುಮಾರಿಗೆ ಮದುವೆಗೆ ಹೋಗಲು ಮನವೊಲಿಸಿ ಕರೆದುಕೊಂಡು ಸ್ನೇಹಿತ ವಿಷ್ಣು ತನ್ನ ಬೈಕ್‍ನಲ್ಲಿ ಪ್ರಯಾಣಿಸಿದ್ದಾನೆ ಎಂದು ಮೃತನ ತಂದೆ ಸೋಮಯ್ಯ ಮಗನನ್ನು ಕಳೆದುಕೊಂಡು ದುಃಖದಿಂದ ಕಂಬನಿ ಮಿಡಿದರು.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತ ಕೌಶಿಕ್‍ನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಕೌಶಿಕ್‍ನ ಕಾಲೇಜು ಸ್ನೇಹಿತರು, ಬಂಧುಗಳು ಶವಗಾರದ ಎದುರು ದುಃಖ ಸಾಗರದಲ್ಲಿ ನರೆದಿದ್ದರು.

ಅಪಘಾತಗಳಿಗೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇರುವದೇ ಮುಖ್ಯ ಕಾರಣ. ಹೆಲ್ಮೆಟ್ ಧರಿಸಿದ್ದರೆ ಆತ ಬದುಕುಳಿಯುವ ಎಲ್ಲಾ ಸಾಧ್ಯತೆಗಳು ಇದ್ದವು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಜು ಅಭಿಪ್ರಾಯಪಟ್ಟರು.