ಮಡಿಕೇರಿ, ಮೇ 19 : ಕೊಯ್ಲೋತ್ತರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಬೆಳೆಗಾರರು ಆರ್ಥಿಕ ಚೈತನ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಂಪ್ರದಾಯಿಕ ಬೆಳೆಯೊಂದಿಗೆ ಪರ್ಯಾಯವಾಗಿ ಇತರ ಯಾವ ರೀತಿಯ ಬೆಳೆಗಳನ್ನು ಬೆಳೆಯಬಹುದೆನ್ನುವ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವ ‘ರಾಷ್ಟ್ರೀಯ ಸಮ್ಮೇಳನ’ ಹಾಗೂ ವಸ್ತು ಪ್ರದರ್ಶನ ತಾ. 20 ರಿಂದ 22 ರವರೆಗೆ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಕೊಡಗು ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ ಮತ್ತು ಕರಿಮೆಣಸು ಕೃಷಿಯೊಂದಿಗೆ ತೋಟಗಾರಿಕಾ ಬೆಳೆಗಳನ್ನು ಬೆಳೆÉದು ಆರ್ಥಿಕ ಸಬಲೀಕರಣಗೊಳ್ಳುವಂತೆ ಉತ್ತೇಜನ ನೀಡುವ ಉದ್ದೇಶದಿಂದ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ಐಸಿಆರ್, ಐಐಹೆಚ್‍ಆರ್ ಬೆಂಗಳೂರು ಮತ್ತು ತೋಟಗಾರಿಕಾ ಅಭಿವೃದ್ಧಿ ಸೊಸೈಟಿಯ ಸಹಕಾರದೊಂದಿಗೆ ಮೂರು ದಿನಗಳ ಸಮ್ಮೇಳನವನ್ನು ಆಯೋಜಿಸಿದೆ.

ಭವಿಷ್ಯದ ಹಣ್ಣಿನ ಬೆಳೆಗಳಾದ ಬೆಣ್ಣೆ ಹಣ್ಣು, ರಾಂಬೂಟಾನ್, ಕೊಕಮ್, ಕವಳೆ ಹಣ್ಣು, ನೇರಳೆ, ಲಿಚ್ಚಿ ಇತರೆ ಹಣ್ಣುಗಳು ಹಾಗೂ ಹೂವಿನ ಬೆಳೆಯನ್ನು ಸ್ಥಳೀಯ ಬೆಳೆÉಗಾರರು ತಮ್ಮ ಸಾಂಪ್ರದಾಯಿಕ ಕಾಫಿ, ಕಿತ್ತಳೆ, ಕರಿಮೆಣಸಿನೊಂದಿಗೆ ಹೇಗೆ ಬೆಳೆಯಬಹುದೆನ್ನುವ ಬಗ್ಗೆ ಚರ್ಚೆಗಳು ನಡೆಯಲಿದೆ. ಪ್ರಮುಖವಾಗಿ ಸಮ್ಮೇಳನದಲ್ಲಿ ಜೀವ ವೈವಿಧ್ಯತೆ, ಮಿಶ್ರ ಬೆಳೆ, ಜೇನು ಕೃಷಿ, ಕೊಡಗಿನ ಕಿತ್ತಳೆ, ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧಿತ ಮಾರುಕಟ್ಟೆ ಮತ್ತು ಭವಿಷ್ಯದ ಹಣ್ಣಿನ ಬೆಳೆ ಸೇರಿದಂತೆ ಒಟ್ಟು ಎಂಟು ವಿಷಯಗಳ ಬಗ್ಗೆ ಚರ್ಚೆ, ರೈತರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯಲಿದೆ.

ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧೆಡೆಗಳ ನೂರು ಮಂದಿ ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಸಂದರ್ಭ ನಡೆಯುವ ವಸ್ತು ಪ್ರದರ್ಶನದಲ್ಲಿ 50 ಕ್ಕೂ ಹೆಚ್ಚಿನ ಮಳಿಗೆಗಳು ಬೆಳೆಗಾರರನ್ನು ಆಕರ್ಷಿಸಲಿವೆ.

ಸಮ್ಮೇಳನದಲ್ಲಿ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಉಪ ಮಹಾ ನಿರ್ದೇಶಕರಾದ ಡಾ| ಎ.ಕೆ. ಸಿಂಗ್, ಸಹಾಯಕ ಮಹಾ ನಿರ್ದೇಶಕರಾದ ಡಾ| ಜಾನಕಿ ರಾಮ್, ಕೃಷಿ ವಿಶ್ವ ವಿದ್ಯಾನಿಲಯಗಳ ಕುಲಪತಿಗಳಾದ ಡಾ|ಡಿ.ಎಲ್. ಮಹೇಶ್ವರ್, ಡಾ| ವಾಸು ದೇವಪ್ಪ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ|ಎಂ.ಆರ್. ದಿನೇಶ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.