*ಗೋಣಿಕೊಪ್ಪಲು, ಮೇ 20: ಬಡವರ್ಗದವರು ಸರಕಾರದ ಸೌಲಭ್ಯಗಳಿಂದ ಮತ್ತು ಮೂಲಭೂತ ಸೌಕರ್ಯದಿಂದ ಇಂದಿಗೂ ವಂಚಿತರಾಗುತ್ತಿದ್ದಾರೆ ಎಂದರೆ ಇದು ರಾಜಕಾರಣಿಗಳ ನಾಯಕತ್ವದ ವೈಫಲ್ಯತೆಯೆ ಕಾರಣ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ವಿಶ್ಲೇಷಿಸಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸಂಭವನಂದಾಜಿ ಸಭಾಂಗಣದಲ್ಲಿ ಹಿರಿಯ ಸನ್ಯಾಸಿ ಸ್ವಾಮಿ ಜಗದಾತ್ಮನಂದಾ ಮಹಾರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಿಸ್ಟರ್ ನಿವೇದಿತಾ 150ನೇ ಹುಟ್ಟುಹಬ್ಬ, ಶಾರದಾದೇವಿ ವೃತ್ತಿಪರ ಶಿಕ್ಷಣ ಕೇಂದ್ರ ಮತ್ತು ಯೋಗ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರಕಾರದ ಸವಲತ್ತುಗಳು ನೇರವಾಗಿ ಬಡವರ ಜೋಳಿಗೆಗೆ ಬೀಳುತ್ತಿಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದೆ. ಇದನ್ನು ನಿವಾರಿಸಲು ಸಮಾಜದ ನಾಯಕರು ಎನಿಸಿಕೊಂಡವರು ಮುಂದಾU Àಬೇಕಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಉದ್ಧಾರಕ್ಕೆ ರಾಮಕೃಷ್ಣ ಆಶ್ರಮ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವದು ಶ್ಲಾಘನೀಯ. ಹಾಡಿ, ಕಾಲೋನಿಗಳಿಗೆ ಕುಡಿಯುವ ನೀರು, ಶೌಚಾಲಯ, ಬಟ್ಟೆ, ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳÀು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿಕೊಡುತ್ತಿರುವದು ಮಹೋನ್ನತ ಕಾರ್ಯವಾಗಿದೆ. ಇಂತಹ ಪ್ರಯತ್ನವನ್ನು ಪ್ರತಿ ಸಂಘ ಸಂಸ್ಥೆಗಳು ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಮಹಿಳೆ ಮತ್ತು ಮಕ್ಕಳಿಗಾಗಿ ಆಶ್ರಮದ ವತಿಯಿಂದ ವಿಶೇಷ ತರಬೇತಿ, ಸವಲತ್ತುಗಳನ್ನು ನೀಡುತ್ತಿದೆ. ಈ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಶ್ರಮಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ ಮತ್ತು ಎಂ.ಎಲ್ಸಿ ಅನುದಾನದಿಂದ 5 ಲಕ್ಷ ಹಣ ನೀಡುವದಾಗಿ ಈ ಸಂದರ್ಭ ಭರವಸೆ ನೀಡಿದರು.

ಆಶ್ರಮದ ವತಿಯಿಂದ ವೃತ್ತಿಪರ ಶಿಕ್ಷಣ, ಯೋಗ ತರಬೇತಿ, ಗ್ರಾಮೀಣ ಅಭಿವೃದ್ಧಿ ಸಂಕಲ್ಪ, ಮಹಿಳೆಯರಿಗೆ ಹೊಲಿಗೆ ತರಬೇತಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಆಶ್ರಮ ಬಡವರಿಗಾಗಿ ಶ್ರಮಿಸುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಫಲಾನುಭವಿಯೂ ಪಡೆದುಕೊಳ್ಳಬೇಕು ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಭೋದಸ್ವರೂಪನಂದ ಮಹಾರಾಜ್ ತಿಳಿಸಿದರು.

ತಾ.ಪಂ. ಮಾಜಿ ಸದಸ್ಯ ಕೋಳೆರ ದಯಾ ಚಂಗಪ್ಪ ಮಾತನಾಡಿ, ಸರಕಾರದ ಸೌಲಭ್ಯಗಳು ಬಡವರ್ಗ ದವರಿಗೆ ಸುಲಭದಲ್ಲಿ ದೊರಕುತ್ತಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂತವರಿಗೆ ಹಲವು ಸೌಕರ್ಯಗಳನ್ನು ಶಕ್ತಿ ಮೀರಿ ತಲುಪಿಸುವ ಕಾರ್ಯ ಆಶ್ರಮದಿಂದ ನಡೆಯುತ್ತಿದೆ ಎಂದು ಹೇಳಿದರು.

ಚೆನೈ ರಾಮಕೃಷ್ಣ ಮಠದ ಸನ್ಯಾಸಿಗಳಾದ ಧರ್ಮಿಷ್ಠನಂದಾ ಮಹಾರಾಜ್ ಸಹೋದರಿ ನಿವೇದಿತಾ ಅವರ ಬದುಕು ಮತ್ತು ತ್ಯಾಗದ ಬಗ್ಗೆ ವಿವರಿಸಿದರು. ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ಮತ್ತು ಸಮಾಜಸೇವಕ ಎರ್ಮು ಮಾತನಾಡಿದರು.

ಸುಮಾರು 15ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಹಾಗೂ ಸೀರೆಗಳನ್ನು ವಿತರಿಸಲಾಯಿತು. ಹಳ್ಳಿಗಟ್ಟು ಗ್ರಾಮದ ಹೊದೂರು ನಿವಾಸಿಗಳಿಗೆ ಸೋಲಾರ್ ಲ್ಯಾಂಪ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ಹಿರಿಯ ಸನ್ಯಾಸಿ ಧರ್ಮಾತ್ಮಾನಂದಾ ಮಹಾರಾಜ್, ಪರಹಿತ ನಂದಾ ಮಹಾರಾಜ್ ಹಾಜರಿದ್ದರು.