*ಗೋಣಿಕೊಪ್ಪಲು, ಮೇ 22: ಹಿರಿಯರು-ಕಿರಿಯರು ಎಂಬ ಭೇದÀವಿಲ್ಲದೆ ಪರಸ್ಪರ ಕೆಸರೆರಚಾಟದೊಂದಿಗೆ ವಿಭಿನ್ನವಾಗಿ ವಿಜೃಂಭಣೆಯಿಂದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡುಹಬ್ಬ ನೆರವೇರಿತು. ಎರಡು ದಿನಗಳ ಕಾಲ ನಡೆದ ಹಬ್ಬದಲ್ಲಿ ಶನಿವಾರದಂದು ಗುಂಡಿಯತ್ ಅಯ್ಯಪ್ಪ ದೇವರ ‘ಅವುಲ್’ ವಿಶೇಷ ಪೂಜೆ, ಮನೆ ಮನೆಗೆ ವೇಷ ಧರಿಸಿ ಕಾಣಿಕೆ ಬೇಡುವದು. ಭಾನುವಾರ ಭದ್ರಕಾಳಿ ಮತ್ತು ಗುಂಡಿಯತ್ ಅಯ್ಯಪ್ಪ ದೇವರ ಮೊಗ, ಕುದುರೆ, ಕೆಸರಿನ ಎರೆಚಾಟ ಮತ್ತು ಹರಕೆ, ಭಂಡಾರ ಒಪ್ಪಿಸುವ ಕಾರ್ಯಕ್ರಮದೊಂದಿಗೆ ಹಬ್ಬವನ್ನು ಆಚರಿಸಲಾಯಿತು. ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ‘ಪೆÇಲವಂದೆರೆ’ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೆÇಲವಪ್ಪಂಡ ಕೋಟದಲ್ಲಿ ಊರಿನ ಪುರುಷರು-ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದಕ್ಕೂ ಮುಂಚೆ ಇಬ್ಬರು ಕೊಡವ ಪೂಜಾರಿಗಳು ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಲಾಯಿತು. ನಂತರ ಕೆರೆಯ ಹತ್ತಿರ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಅದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ್ಯ ತಯಾರು ಮಾಡಲಾಯಿತು. ಈ ಇಬ್ಬರು ಪೂಜಾರಿಗಳು ಬೆಳಿಗ್ಗೆಯಿಂದಲೇ ಉಪವಾಸ ಹಾಗೂ ಬಹಳ ಕಟ್ಟುನಿಟ್ಟಿನಲ್ಲಿದ್ದು, ಕುಟ್ಟಿ ತಯಾರಿಸಿದ ಅವಲಕ್ಕಿಗೆ ಬಾಳೆಹಣ್ಣು ಸೇರಿಸಿ ನೈವೇದ್ಯ ಮಾಡಿ ಪ್ರಸಾದವಾಗಿ ಭಕ್ತಾದಿಗಳಿಗೆ ವಿತರಿಸಿದರು.

ನಂತರ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿದರು. ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಹಾಕಲಾಯಿತು. ಇಲ್ಲಿ ವಿಶೇಷ ಪೂಜೆಯ ನಂತರ ಹರಕೆ ಎಂಬಂತೆ ಸಾವಿರಾರು ಈಡುಕಾಯಿಯನ್ನು ಭಕ್ತರು ಒಡೆದರು. ತೆಂಗಿನಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸಿದರು. ಇಲ್ಲಿಂದ ಹೊರಟು ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯ ಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಮನೆ-ಮನೆ ಹೊರಡುತ್ತಾರೆ.

ಈ ಹಿಂದೆ ಊರಿನ ಮನೆಯನ್ನೆಲ್ಲಾ ಸುತ್ತುತ್ತಿದ್ದು, ಇದೀಗ ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಯಲ್ಲಿ ಈ ಕಳಿ ಹೊರಡುತ್ತದೆ. ಭಾನುವಾರದಂದು ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗ ಹೊರಟು ಊರಿನ ಪ್ರಮುಖ ದೇವಾಲಯ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸೇರಿ ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಆಲಂಗಿಸಿಕೊಂಡು ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿಕೊಳ್ಳುವದು ಇಲ್ಲಿನ ವಿಶೇಷವಾಗಿದ್ದು, ಹಿರಿಯರು-ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಆಲಂಗಿಸಿಕೊಂಡರು. ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.

- ಎನ್.ಎನ್. ದಿನೇಶ್