ಮಡಿಕೇರಿ, ಮೇ 24: ಕೊಡಗು ಜಿಲ್ಲೆಯೆಲ್ಲೆಡೆ ಇದುವರೆಗೆ ಹತ್ತಾರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳು ಹಾಗೂ ಪಟ್ಟಣಗಳಲ್ಲಿ ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆಯಡಿ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುವ ದರೊಂದಿಗೆ, ಸಂಬಂಧಿಸಿದ ವರ್ತಕರಿಗೆ ಮುನ್ನೆಚ್ಚರಿಕೆ ನೀಡಿ ಪ್ರಥಮವಾಗಿ ರೂ. 200ರಂತೆ ಕನಿಷ್ಟ ದಂಡ ವಿಧಿಸಲಾಗಿದೆ. ಕಾರ್ಯಾ ಚರಣೆಗೆ ಮುನ್ನ ವಿವಿಧ ಇಲಾಖಾಧಿಕಾರಿಗಳು ಪೊಲೀಸರ ಜಂಟಿ ಸಭೆ ನಡೆಸಲಾಯಿತು. ಇಂದು ಮಡಿಕೇರಿ ನಗರದಲ್ಲಿ ತಂಬಾಕು ನಿಯಂತ್ರಣ ಅಧಿಕಾರಿ ಜಾನ್ ಕೆನಡಿ ಹಾಗೂ ಪೊಲೀಸ್ ಮತ್ತು ವಿವಿಧ ಇಲಾಖಾಧಿಕಾರಿಗಳು ಐದು ತಂಡಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು. ತಂಬಾಕು ನಿಷೇಧ ಕಾಯ್ದೆಯಡಿ ಅಂಗಡಿಗಳು, ಬ್ಯಾಂಕ್‍ಗಳು, ಸಾರ್ವಜನಿಕ ಸ್ಥಳಗಳು, ಹೊಟೇಲ್‍ಗಳು, ಶಾಲಾ - ಕಾಲೇಜು ಆವರಣ, ಕಚೇರಿಗಳ ಸಹಿತ ಎಲ್ಲೆಡೆ ನಿಯಮಾನುಸಾರ ಸೂಚನಾ ಫಲಕ ಅಳವಡಿಸಲು 1 ವಾರದ ಗಡುವು ನೀಡಲಾಯಿತು.

ತಂಬಾಕು ಉತ್ಪನ್ನಗಳ ಕಾನೂನು ಬಾಹಿರ ಮಾರಾಟ, ಯುವ ಜನಾಂಗಕ್ಕೆ

(ಮೊದಲ ಪುಟದಿಂದ) ಪ್ರಚೋದಿಸುವದು, ನಿಯಮ ಉಲ್ಲಂಘಿಸುವದು, ಹಾದಿ ಬೀದಿಗಳಲ್ಲಿ ಧೂಮಪಾನ ಇತ್ಯಾದಿ ವಿರುದ್ಧ ಎಲ್ಲೆಡೆ ಮುನ್ನೆಚ್ಚರಿಕೆ ನೀಡುವದರೊಂದಿಗೆ, ಮುಂದಿನ ದಿನಗಳಲ್ಲಿ ಕಠಿಣ ನಿಯಮ ಜಾರಿಯ ಸುಳಿವು ನೀಡಲಾಯಿತು.

ಶನಿವಾರಸಂತೆ ವರದಿ

ಶನಿವಾರಸಂತೆ ಗ್ರಾಮ ಪಂಚಾಯಿತಿ, ದುಂಡಳ್ಳಿ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ತಂಬಾಕು ಉತ್ಪನ್ನ ನಿಯಂತ್ರಣ ಮಂಡಳಿಯ ಅಧಿಕಾರಿ ಜಾನ್ ಕೆನಡಿ ತಂಡದೊಂದಿಗೆ ತೆರಳಿ ಸೂಚನಾ ಫಲಕ ಅಳವಡಿಸದೆ ಇರುವದು ಹಾಗೂ ಸಾರ್ವಜನಿಕರಿಗೆ ತಿಳಿಯಪಡಿಸದೆ ಇರುವದರಿಂದ ಪಿ.ಡಿ.ಒ.ಗಳಾದ ಹರೀಶ್ ಹಾಗೂ ವೇಣುಗೋಪಾಲ್ ಅವರುಗಳಿಗೆ ತಲಾ ರೂ.200 ದಂಡ ವಿಧಿಸಲಾಯಿತು. ಪೊಲೀಸರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳನ್ನು 2 ತಂಡಗಳನ್ನಾಗಿ ವಿಂಗಡಿಸಿ ನಗರದ ಅಂಗಡಿಗಳು ಹೊಟೇಲ್, ಬ್ರಾಂಡಿ ಅಂಗಡಿ, ಬಾರ್, ಪೆಟ್ರೋಲ್ ಬಂಕ್, ಗ್ಯಾಸ್ ಅಂಗಡಿ, ಬ್ಯಾಂಕ್, ಕೃಷಿಪತ್ತಿನ ಸಹಕಾರ ಸಂಘ, ಕಲ್ಯಾಣಮಂಟಪ, ಐಸ್‍ಕ್ಯಾಂಡಿ ಫ್ಯಾಕ್ಟರಿ, ಮೀನು ಮಾರುಕಟ್ಟೆ, ಕೋಳಿಮಾಂಸ ಮಾರುಕಟ್ಟೆ, ಚಿತ್ರಮಂದಿರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸದ ಹಿನೆÀ್ನಲೆಯಲ್ಲಿ ರೂ. 100-200-1000ದಂತೆ ದಂಡ ವಿಧಿಸಲಾಯಿತು. ಈ ಸಂದರ್ಭ ಅಧಿಕಾರಿಗಳು ಮತ್ತು ಅಂಗಡಿಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಜೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ 160 ಪ್ರಕರಣವನ್ನು ದಾಖಲಿಸಲಾಗಿದ್ದು, ಒಟ್ಟು ರೂ. 31,600ದಂಡ ವಸೂಲು ಮಾಡಲಾಗಿದೆ. ಶನಿವಾರಸಂತೆಯಲ್ಲಿ ಅಧಿಕಾರಿ ಡಾ. ಜಾನ್ ಕೆನಡಿ ಪೊಲೀಸ್ ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಠಾಣಾಧಿಕಾರಿ ಹೆಚ್. ಎಂ. ಮರಿಸ್ವಾಮಿ, ವೈದ್ಯಾಧಿಕಾರಿ ಶಿವಕುಮಾರ್, ಡಾ. ಸುಪರ್ಣ, ಶಿಕ್ಷಣ ಇಲಾಖೆಯ ಪ್ರಾಂಶುಪಾಲರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪೊಲೀಸ್ ಸಹಾಯಕಿ ಸಬ್ ಇನ್ಸ್‍ಪೆಕ್ಟರ್ ಖತೀಜಾ, ಪೊಲೀಸರು ಹಾಗೂ ವಿವಿಧ ಇಲಾಖಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಚಿತ್ರ- ವರದಿ: ನರೇಶ್ಚಂದ್ರ