ಪೊನ್ನಂಪೇಟೆ, ಮೇ 25: ಜನಪ್ರತಿನಿಧಿ ಅಲ್ಲದಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮದ ರಸ್ತೆ ಅಭಿವೃದ್ದಿಗೆ ಮುತುವರ್ಜಿ ತೆಗೆದುಕೊಂಡ ತನ್ನ ಸಾಮಾಜಿಕ ಕಳಕಳಿಯನ್ನು ಸಹಿಸದ ಕೆಲವರು ಸ್ಥಳೀಯ ಗ್ರಾ.ಪಂ. ಸದಸ್ಯರೊಬ್ಬರನ್ನು ಪ್ರಚೋದಿಸಿ ದುರುದ್ದೇಶದ ಹೇಳಿಕೆ ನೀಡಿದ್ದಾರೆ. ಅವರು ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ಅನಗತ್ಯ ಹೇಳಿಕೆ ನೀಡಿದ್ದಾರೆ ಎಂದು ಬೇಟೋಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ಎಂ.ಎ. ಮೊಯ್ದು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಸದಸ್ಯರಿಗೆ ತಾನು ಕಿರುಕುಳ ನೀಡಿರುವದಾಗಿ ಹೊರಿಸಿದ ಆರೋಪ ಹಾಗೂ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ದುರುದ್ದೇಶ ಪೂರಿತ ಹೇಳಿಕೆ ಸತ್ಯಕ್ಕೆ ದೂರವಾದದು ಎಂದು ಹೇಳಿದರು.

ಕಳೆದ 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಹೀಗಿರುವಾಗ ಇತ್ತೀಚೆಗೆ ಪಕ್ಷದ ಬೆಂಬಲಿತ ಸದಸ್ಯರಾಗಿ ಗ್ರಾ.ಪಂ.ಗೆ ಆಯ್ಕೆಗೊಂಡಿರುವದರಿಂದÀ ಪಾಠ ಕಲಿಯಬೇಕಾಗಿಲ್ಲ ಎಂದ ಅವರು, ಯಾವ ಬೆದರಿಕೆಗೂ ಜಗ್ಗದೆ ಸುಳ್ಳು ಆರೋಪ ಹೊರಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವದಾಗಿ ಎಚ್ಚರಿಸಿದ್ದಾರೆ.

ಗೋಷ್ಠಿಯಲ್ಲಿ ಗುಂಡಿಗೆರೆ ಗ್ರಾಮದ ಸಿ.ಯು. ಮಹಮ್ಮದ್ ಉಪಸ್ಥಿತರಿದ್ದರು.