ಸುಂಟಿಕೊಪ್ಪ, ಮೇ. 25: ಯೋಗಾಭ್ಯಾಸದಿಂದ ವ್ಯಕ್ತಿಯ ಮಾನಸಿಕ ಸದೃಢತೆ, ಬುದ್ಧಿಮತ್ತೆ ಹೆಚ್ಚಲಿದ್ದು ಆರೋಗ್ಯ ವೃದ್ಧಿಯಾಗಿ ಸಮಚಿತ್ತದ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗಲಿದ್ದು ಆತ್ಮಶಕ್ತಿ ಯನ್ನು ಪಡೆದುಕೊಳ್ಳ ಬಹುದು ಎಂದು ದೊಡ್ಡಬಳ್ಳಾಪುರದ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದ ಆಚಾರ್ಯ ವಿಶ್ವಾಮಿತ್ರ ಹೇಳಿದರು. ಇಲ್ಲಿನ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದ್ದ 10 ದಿನಗಳ ಯೋಗ, ಮತ್ತು ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಸಂತೋಷ, ಆನಂದ ತೃಪ್ತಿಗಾಗಿ ನಮ್ಮ ಚಿತ್ತವನ್ನು ಆತ್ಮದ ಕಡೆ ಸಾಗಲು ಪ್ರಯತ್ನಿಸಬೇಕು. ಯೋಗದಿಂದ ಇದನ್ನು ಸಾಧಿಸಿ ಪರಮಾತ್ಮನಲ್ಲಿ ನಮ್ಮನ್ನು ಲೀನವಾಗಿಸಲು ಪ್ರಯತ್ನಿಸಬಹುದು ಎಂದು ಹೇಳಿದರು. ರಾಮ ಸೇವಾ ಸಮಿತಿಯ ಉಪಾಧ್ಯಕ್ಷ ಕೆ.ಪಿ. ಜಗನ್ನಾಥ್ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಯಾಗಿ ಗ್ರಾ. ಪಂ. ಉಪಾಧ್ಯಕ್ಷ ಬಿ. ಎಸ್. ಸದಾಶಿವ ರೈ ಯೋಗದ ಬೆಲೆ ಕಟ್ಟಲು ಸಾಧ್ಯವಿಲ್ಲ ನಮ್ಮ ಎಲ್ಲಾ ಅಂಗಗಳಿಗೆ ಯೋಗಾಭ್ಯಾಸದಿಂದ ಚಿಕಿತ್ಸೆ ಪಡೆಯಬಹುದು ಯೋಗ ಶಿಬಿರದಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.

ರಾಮ ಸೇವಾ ಸಮಿತಿ ಜಂಟಿ ಕಾರ್ಯದರ್ಶಿ ಆಶೋಕ್‍ಶೇಠ್ ಕಾರ್ಯಕ್ರಮ ನಿರೂಪಿಸಿದರು. ಸುಂಟಿಕೊಪ್ಪ ಗ್ರಾ.ಪಂ. ಉಪಾದ್ಯಕ್ಷ ಪಿ.ಆರ್. ಸುಕುಮಾರ್, ಹಾಗೂ ರಾಮ ಸೇವಾ ಸಮಿತಿ ಸಲಹೆಗಾರ ಎಂ. ಎ. ವಸಂತ್ ಸಭೆಯಲ್ಲಿ ಉಪಸ್ಥಿತರಿದ್ದರು.