ಶನಿವಾರಸಂತೆ, ಮೇ 27: ಕೊಡ್ಲಿಪೇಟೆ ವ್ಯಾಪ್ತಿಯ ಕಟ್ಟೆಪುರದ ಹೇಮಾವತಿ ಹಿನ್ನಿರಿನ ಹೊಳೆಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ (ಕೆಎ-02-ಎಬಿ-3695, ಟಿಪ್ಪರು), (ಕೆಎ-13-ಟಿ-6249 ಟ್ರ್ಯಾಕ್ಟರ್) ಹಾಗೂ ಬೆಂಗವಾಲಾಗಿದ್ದ (ಕೆಎ-13-ಎಂ-5998 ಕಾರು) ಮೂರು ವಾಹನಗಳ ಸಹಿತ ಈರ್ವರು ಆರೋಪಿಗಳನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಬೆಳಿಗ್ಗೆ ಈ ಬಗ್ಗೆ ದೊರೆತ ಮಾಹಿತಿಯ ಮೇರೆ ಡಿ.ವೈ.ಎಸ್.ಪಿ ಸಂಪತ್‍ಕುಮಾರ್ ಅವರ ಮಾರ್ಗ ದರ್ಶನದಲ್ಲಿ ಶನಿವಾರಸಂತೆ ಠಾಣಾಧಿಕಾರಿ ಹೆಚ್. ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೂರು ವಾಹನ, ಮರಳನ್ನು ವಶಪಡಿಸಿಕೊಂಡು ಆರೋಪಿಗಳಾದ ನಿಲುವಾಗಿಲು ಗ್ರಾಮದ ಚಿದಾನಂದ ಹಾಗೂ ರಾಜೇಶ್ ಅವರುಗಳನ್ನು ಬಂಧಿಸಿ ವಿಧಿ 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ಇನ್ನಿರ್ವರು ಆರೋಪಿಗಳಾದ ವರಣ್, ಮಂಜುನಾಥ್, ತಲೆ ಮರೆಸಿಕೊಂಡಿರುತ್ತಾರೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್. ಎಂ. ಮರಿಸ್ವಾಮಿ ಸಿಬ್ಬಂದಿಗಳಾದ ನಾರಾಯಣಗೌಡ, ವೆಂಕಟೇಶ್, ಕೇಶವಮೂರ್ತಿ, ಸಂತೋಷ್, ಶಪೀರ್, ರಮೇಶ್, ಚಾಲಕ ವಿವೇಕ್ ಪಾಲ್ಗೊಂಡಿದ್ದರು.

-ನರೇಶ್ಚಂದ್ರ ಶನಿವಾರಸಂತೆ