ಕೂಡಿಗೆ, ಮೇ 27: ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ.29 ರಂದು ಶಾಲಾ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವ ನಡೆಯಲಿದೆ.

ಒಂದನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆಯಲು ಮತ್ತು ಪ್ರಾರಂಭೋತ್ಸವದ ಅಂಗವಾಗಿ ಶಾಲಾ ಮಕ್ಕಳನ್ನು ಸ್ವಾಗತಿಸಲು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಸುನೀತ, ತಾ.ಪಂ ಸದಸ್ಯೆ ಸುಹಾದ ಅಶ್ರಫ್, ಗ್ರಾ.ಪಂ ಅಧ್ಯಕ್ಷೆ ನಾಗರತ್ನ, ಸದಸ್ಯರುಗಳಾದ ಭುವನೇಂದ್ರ, ಕವಿತಾ, ಕಮಲಮ್ಮ, ಅಂಚೆಮನೆ ಸುಧಿ, ಪ್ರಭಾರ ಡಿಡಿಪಿಐ ಮಲ್ಲೇಸ್ವಾಮಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲಕ್ಷ್ಮಿ ಸೇರಿದಂತೆ ಸದಸ್ಯರುಗಳು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕುಶಾಲನಗರ ಮೈಸ್ ಕಂಪ್ಯೂಟರ್ಸ್ ಮಾಲೀಕ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಪುಸ್ತಕ ಮತ್ತು ಪೆನ್ ಉಚಿತವಾಗಿ ನೀಡಲಿದ್ದಾರೆ. ಕುಶಾಲನಗರ ಲಕ್ಷ್ಮಿ ಟ್ರೇಡರ್ಸ್‍ನ ವಿ.ಎಲ್.ಕೃಷ್ಣರಾಜ್ ಒಂದನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‍ಗಳನ್ನು ವಿತರಣೆ ಮಾಡಲಿದ್ದಾರೆ. ಸರ್ಕಾರದಿಂದ ನೀಡುವ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ತಿಳಿಸಿದ್ದಾರೆ.