ಕಾಯಕಲ್ಪಕ್ಕೆ ಗ್ರಾಮಸ್ಥರ ಆಗ್ರಹ

ಸೋಮವಾರಪೇಟೆ, ಮೇ 27: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಸವನಕೊಪ್ಪ ಗ್ರಾಮದ ಮುಖ್ಯ ರಸ್ತೆಯ ಸೇತುವೆ ಅಪಾಯದ ಅಂಚಿನಲ್ಲಿದ್ದು, ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಶಿಥಿಲಾವಸ್ಥೆಗೆ ತಲಪಿರುವ ಸೇತುವೆ ಬಲಿಗಾಗಿ ಕಾಯುತ್ತಿದೆ.

ಬೀಟಿಕಟ್ಟೆ, ಕೋಟೆಯೂರು, ಬಸವನಕೊಪ್ಪ, ಹಣಸೆ, ಈಚಲು ಬೀಡು ಮೂಲಕ ಶನಿವಾರಸಂತೆಗೆ ತೆರಳುವ ರಸ್ತೆಯಲ್ಲಿ ಈ ಸೇತುವೆಯಿದ್ದು ರಾತ್ರಿ ಸಮಯದಲ್ಲಿ ಚಾಲಕರು ಈ ರಸ್ತೆಯಲ್ಲಿ ವೇಗವಾಗಿ ಚಲಿಸಿ, ಸೇತುವೆ ಸನಿಹದ ಗುಂಡಿಗೆ ಬಿದ್ದರೆ ಅನಾಹುತ ಸಂಭವಿಸುವದರಲ್ಲಿ ಅನುಮಾನವಿಲ್ಲ. ಈ ಸೇತುವೆಯನ್ನು ನಾಲ್ಕು ದಶಕಗಳ ಹಿಂದೆಯೇ ನಿರ್ಮಿಸಲಾಗಿದ್ದು, ಪ್ರಸ್ತುತ ತೀರಾ ಶಿಥಿಲಾವಸ್ಥೆಗೆ ತಲಪಿದೆ. ಮರಳು ತುಂಬಿದ ಲಾರಿಗಳು ಹಾಗೂ ಮರಗಳನ್ನು ಸಾಗಿಸುವ ಭಾರೀ ವಾಹನಗಳು, ಕಾರ್ಮಿಕರನ್ನು ಸಾಗಾಟಗೊಳಿಸುವ ಹತ್ತಾರು ವಾಹನಗಳು ದಿನಂಪ್ರತಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಮಾತ್ರ ಸೇತುವೆ ದುರಸ್ತಿಗೆ ಮನಸ್ಸು ಮಾಡಿಲ್ಲ.

ಮಳೆಗಾಲದಲ್ಲಿ ನದಿ ನೀರು ರಭಸದಿಂದ ಹರಿಯುವದರಿಂದ ಒಂದು ವೇಳೆ ಸೇತುವೆ ಕುಸಿದರೆ ಅನಾಹುತವಾಗುವದರಲ್ಲಿ ಸಂಶಯವಿಲ್ಲ ಎಂಬದು ಸ್ಥಳೀಯರ ಆತಂಕ. ಬೀಟಿಕಟ್ಟೆಯಿಂದ ಬಸವನಕೊಪ್ಪ, ಶನಿವಾರಸಂತೆ ರಸ್ತೆ ಸುಸ್ಥಿತಿಯಲ್ಲಿರುವ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ವಾಹನಗಳಲ್ಲಿ ತಾವು ಬೆಳೆದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಈ ರಸ್ತೆಯಲ್ಲೇ ಸಾಗಿಸುತ್ತಿದ್ದಾರೆ. ಈಗ ಸೇತುವೆ ಕುಸಿಯುವ ಹಂತದಲ್ಲಿರುವ ಪರಿಣಾಮ ಆತಂಕಪಡುವಂತಾಗಿದೆ.

ಬಸವನಕೊಪ್ಪ ಸೇತುವೆ ದುರಸ್ತಿ ಮಾಡುವಂತೆ ಕಳೆದೆರಡು ವರ್ಷಗಳಿಂದ ಲೋಕೋಪಯೋಗಿ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಗ್ರಾಮೀಣ ಭಾಗಗಳ ಜನರ ಸಮಸ್ಯೆಯನ್ನು ಬಗೆಹರಿಸುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿದರೆ ಒಳಿತು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸೇತುವೆಯಲ್ಲಿ ಶಾಲಾ ಮಕ್ಕಳು ತಿರುಗಾಡಲು ಹೆದರುತ್ತಿದ್ದಾರೆ. ಕಳೆದ ವರ್ಷ ಬಿದ್ದ ಭಾರೀ ಮಳೆಯಿಂದ ಸೇತುವೆ ಪಕ್ಕದ ಮಣ್ಣು ಕುಸಿಯುತ್ತಿದೆ. ವಾಹನ ಚಾಲಕರು ಭಯಪಡುವಂತಾಗಿದೆ ಎಂದು ಗ್ರಾಮಸ್ಥ ಕಾರ್ತಿಕ್‍ಕುಮಾರ್ ಪತ್ರಿಕೆಯೊಂದಿಗೆ ದೂರಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಸೇತುವೆ ದುರಸ್ತಿಯತ್ತ ಗಮನಹರಿಸಬೇಕೆಂದು ಈ ರಸ್ತೆಯನ್ನೇ ಅವಲಂಬಿಸಿರುವ ಜನತೆ ಒತ್ತಾಯಿಸಿದ್ದಾರೆ.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಮಾಜಿ ಉಪಾಧ್ಯಕ್ಷ ಹಾಗೂ ಅಲ್ಲಿನ ಸ್ಥಳೀಯ ಮುಖಂಡ ಎಸ್.ಬಿ. ಭರತ್ ಕುಮಾರ್ ಮಾತನಾಡಿ, ನಾಲ್ಕಾರು ವರ್ಷಗಳ ಹಿಂದೆಯೇ ಕೊಡಗು-ಹಾಸನ ನಡುವೆ ಸಂಪರ್ಕ ಕಲ್ಪಿಸುವ ಬಸವನಕೊಪ್ಪಲು ಸೇತುವೆ ಶಿಥಿಲಗೊಂಡಿರುವ ಬಗ್ಗೆ ‘ಶಕ್ತಿ’ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡರೂ ಇರುವರೆಗೆ ಯಾರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಥಿಲಗೊಂಡಿರುವ ಸೇತುವೆ ಹಾಗೂ ಹದಗೆಟ್ಟಿರುವ ರಸ್ತೆಯಿಂದಾಗಿ ಎರಡು ಜಿಲ್ಲೆಗಳ ಗಡಿ ಗ್ರಾಮಸ್ಥರಿಗೆ ಸಂಪರ್ಕ ಕಲ್ಪಿಸುವಲ್ಲಿ ನಿತ್ಯ ತೊಂದರೆಯಾಗಿದ್ದು, ಲೋಕೋಪಯೋಗಿ ಇಲಾಖೆ ಮತ್ತು ಸಂಬಂಧಿಸಿದ ಸಚಿವರ ಗಮನಸೆಳೆದು ವಿಶೇಷ ಅನುದಾನ ಕೊಡಿಸುವಂತೆ ಮನವಿ ಮಾಡಿದರು.

ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಟಿಲಗೊಂಡಿದ್ದು, ರಾತ್ರಿವೇಳೆ ಗ್ರಾ.ಪಂ. ಪ್ರಮುಖರು ಹಾಗೂ ಪಂಚಾಯಿತಿ ಸದಸ್ಯರ ಅರಿವಿಗೆ ಬಾರದಂತೆ ಗುತ್ತಿಗೆದಾರರು ಕದ್ದುಮುಚ್ಚಿ ಕೊಳವೆ ಬಾವಿ ತೆಗೆದು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರೊಂದಿಗೆ ಭರತ್ ಕುಮಾರ್ ಟೀಕಿಸಿದರು.

ಇಂತಹ ಎರಡು ಬೋರ್‍ವೆಲ್‍ಗಳನ್ನು ತೆಗೆದಿದ್ದರೂ ನೀರು ಬರುತ್ತಿಲ್ಲ. ಕೇವಲ 150 ರಿಂದ 200 ಅಡಿ ವ್ಯರ್ಥ ಕೊಳವೆ ನಿರ್ಮಿಸಿ ಹಣ ವ್ಯರ್ಥಗೊಳಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಿ ಪೋಲಾಗಿರುವ ಹಣವನ್ನು ಭರಿಸಿ, ಮತ್ತೆ ಹೊಸ ಕೊಳವೆಬಾವಿ ತೆಗೆಸಲು ಕ್ರಮಕ್ಕೆ ಒತ್ತಾಯಿಸಿದರು.

ಗ್ರಾಮದ ಪುನಿತ್ ಹಾಗೂ ನವೀನ್ ಕೂಡ ಅಧಿಕಾರಿಗಳು ಇತ್ತ ಗಮನ ನೀಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಸುಳಿವು ನೀಡಿದ್ದಾರೆ. ಸೇತುವೆ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆದಿರುವದಾಗಿ ಸಹಾಯಕ ಇಂಜಿನಿಯರ್ ಮಹೇಂದ್ರ ಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಚಿತ್ರ-ವರದಿ: ವಿಜಯ್ ಹಾನಗಲ್