ಸೋಮವಾರಪೇಟೆ, ಮೇ 26: ಜೂ. 5ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಮೂಲತಃ ಚಿತ್ರದುರ್ಗದ ಚಳ್ಳಕೆರೆ ನಿವಾಸಿ, ಕೊಡಗಿನ ಕೊಡ್ಲಿಪೇಟೆಯಲ್ಲಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ ಮಲ್ಲೋರಹಟ್ಟಿ ಅವರನ್ನು ಆಯ್ಕೆಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಂದ್ರಶೇಖರ ಮಲ್ಲೋರಹಟ್ಟಿ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಚಂದ್ರಶೇಖರ ಮಲ್ಲೋರಹಟ್ಟಿ ಅವರು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಮುಗಿಸಿ, ಗ್ರಂಥಾಲಯ ವಿಜ್ಞಾನ ಪದವಿಯನ್ನು ಪಡೆದು ಬೆಂಗಳೂರಿನ ಜಯನಗರ ಗ್ರಂಥಾಲಯದ ಗ್ರಂಥಪಾಲಕರಾಗಿ ಸರಕಾರಿ ಸೇವೆಗೆ ಸೇರಿದರು. ನಂತರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಜಿಲ್ಲಾ ಶಾಖಾ ಗ್ರಂಥಾಲಯ, ಮಂಗಳೂರಿನ ಶ್ರೀ ಕಾರ್ನಾಡ್ ಸದಾಶಿವರಾವ್ ಸ್ಮಾರಕ ಕೇಂದ್ರ ಗ್ರಂಥಾಲಯ, ಮಡಿಕೇರಿಯ ಮಹಾತ್ಮ ಗಾಂಧಿ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಕುಶಾಲನಗರ ಶಾಖಾ ಗ್ರಂಥಾಲಯದಲ್ಲಿ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸಿ 1981ರಿಂದ 2007 ಜೂನ್ 30ರವರೆಗೆ ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆಯ ಶಾಖಾ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಕೊಡ್ಲಿಪೇಟೆಯಲ್ಲಿ 1997ರಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ್ದರು. ಗ್ರಂಥಾಲಯದ ಮುಂಭಾಗದಲ್ಲಿಯೇ

(ಮೊದಲ ಪುಟದಿಂದ) ತಮ್ಮ ಪತ್ನಿ ಮಕ್ಕಳೊಂದಿಗೆ ಸುಂದರ ಕೈತೋಟ ನಿರ್ಮಿಸಿ ಓದುಗರಿಗೆ ಸ್ವಚ್ಛಂದ ಪರಿಸರವನ್ನು ನಿರ್ಮಿಸಿಕೊಟ್ಟಿದ್ದಾರೆ.

ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿಯ ಮಲ್ಲೋರಹಟ್ಟಿ ಗ್ರಾಮದವರಾದ ಕರಿಬಸಪ್ಪ ಮತ್ತು ಬಸಮ್ಮನವರ 9ನೇ ಪುತ್ರರಾಗಿ ಜನಿಸಿದ ಚಂದ್ರಶೇಖರ ಮಲ್ಲೋರಹಟ್ಟಿ ಅವರು ಬಾಗೇನಾಳು ಗ್ರಾಮದ ಶರಣಪ್ಪ ಮತ್ತು ಬಂದಮ್ಮ ನವರ ಪುತ್ರಿ ಪೂರ್ಣಿಮ ಅವರನ್ನು ವಿವಾಹವಾಗಿದ್ದಾರೆ.

ಕೊಡಗು ಜಿಲ್ಲಾ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಚಿಕೆಯ ಹಾಗೂ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪಾದಕರಾಗಿ, ಸೋಮವಾರಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಚಿಕೆಯ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಕೊಡಗು ಜಿಲ್ಲಾ ಗ್ರಂಥಾಲಯ ನೌಕರರ ಸಂಘ, ಮಂಗಳ ಕಲಾ ಸಾಹಿತ್ಯ ವೇದಿಕೆ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾಗಿ, ಕೊಡಗು ಜಿಲ್ಲಾ ವೀರಶೈವ ನೌಕರರ ಸಂಘದ ಪ್ರಥಮ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ದೂರದರ್ಶನದ ಚಂದನ ವಾಹಿನಿಯಲ್ಲಿ ಹಾಗೂ ಮಡಿಕೇರಿ ಆಕಾಶವಾಣಿಯಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಪ್ರಸಾರಗೊಂಡಿದೆ.

ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಇವರು ಕವನ ವಾಚನ ಮಾಡಿದ್ದಾರೆ, ಕೊಡಗು ಜಿಲ್ಲಾಡಳಿತದ ವತಿಯಿಂದ 2007ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಹಲವಾರು ಲೇಖನಗಳು, ಕಥೆ ಕವನಗಳು ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಈ ಹಿಂದೆ ನೆಲ್ಲಿಹುದಿಕೇರಿಯಲ್ಲಿ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರನ್ನು ಆಯ್ಕೆ ಮಾಡಲಾಗಿತ್ತು. ಚಂದ್ರಶೇಖರ ಮಲ್ಲೋರಹಟ್ಟಿ ಅವರು 5 ಕಥಾಸಂಕಲನಗಳು, 6 ಕವನ ಸಂಕಲನಗಳು, ಮಕ್ಕಳ ಕವನ ಸಂಕಲನ ಹಾಗೂ ಚುಟುಕು ಸಂಕಲನ ಮತ್ತು ಕೊಡವ ಭಾಷೆಯಲ್ಲಿ ಕಿರು ಕಾದಂಬರಿ ರಚಿಸಿದ್ದಾರೆ.