ಮಡಿಕೇರಿ, ಮೇ 28: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಇಂದು ಆರಂಭಗೊಂಡಿತು. ಸಂಘದ ಪ್ರಥಮ ಅಧ್ಯಕ್ಷೆಯಾಗಿ ವಿನಿತಾ ಕರುಂಬಯ್ಯ, ಉಪಾಧ್ಯಕ್ಷರಾಗಿ ಗಣೇಶ್ ಮಹೇಂದ್ರ, ಕಾರ್ಯದರ್ಶಿಯಾಗಿ ಸಾಲಿಹಾ ಮಜೀದ್, ಉಪಕಾರ್ಯದರ್ಶಿ ಯಾಗಿ ಸಾಯಿ ಮುತ್ತಣ್ಣ ಆಯ್ಕೆಯಾದರು.

ಆರಂಭಿಕ ಸಭೆ ವಿದ್ಯಾಲಯದ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ, ಉಪಾಧ್ಯಕ್ಷ ಸಿ.ಬಿ. ದೇವಯ್ಯ, ಸೀತಾ ಸುಬ್ಬಯ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಬಿ.ಕೆ. ಸುಬ್ಬಯ್ಯ ಅವರು ಬಾಲ್ಯದ ಒಡನಾಡಿಗಳ ಮಿಲನ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿ ಎಂದರು. ಮತ್ತೆ ಮಕ್ಕಳಂತೆ ನಲಿದು ಅನುಭವ ಹಂಚಿಕೊಂಡು, ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಂಸ್ಥೆಯ ಅಭಿವೃದ್ಧಿಯಲ್ಲೂ ತೊಡಗಿಸಿಕೊಳ್ಳಲು ಇದೊಂದು ಅವಕಾಶ ಎಂದರು.

ಉಪಾಧ್ಯಕ್ಷ ಸಿ.ಬಿ. ದೇವಯ್ಯ, ಸಂಘದ ಅಧ್ಯಕ್ಷೆ ವಿನಿತಾ ಕರುಂಬಯ್ಯ, ಶರತ್ ಅಪ್ಪಯ್ಯ, ಸಂಗೀತ ಪೊನ್ನಪ್ಪ, ರವಿಗಿರಿ ಹಾಗೂ ಇತರರು ಮಾತನಾಡಿದರು. ನೇತ್ರಾ ಕೃಷ್ಣ ನಿರೂಪಿಸಿದರು. ಶಬರಿ ಪ್ರಾಸ್ತಾವಿಕ ನುಡಿಯಾಡಿದರು. ಸಾಲೀಹಾ ಮಜೀದ್ ಸ್ವಾಗತಿಸಿದರು. ಅಚಲಾ ದೇವಯ್ಯ ವಂದನಾರ್ಪಣೆ ಮಾಡಿದರು.