ಮಡಿಕೇರಿ, ಮೇ 30: ನಾಡಿನ ಜೀವನದಿ ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ (ಲಿವಿಂಗ್ ಎಂಟಿಟಿ ವಿತ್ ಲೀಗಲ್ ಪರ್ಸನ್ ಸ್ಟೇಟಸ್)ವನ್ನು ಒದಗಿಸುವ ಮೂಲಕ ನದಿಯ ಸಂರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜೂ.1 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಗಂಗೆ, ಯಮುನಾ ಮತ್ತು ನರ್ಮದಾ ನದಿಗಳಿಗೆ ಅನುಕ್ರಮವಾಗಿ ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನ ಮಾನವನ್ನು ನೀಡಿವೆ. ಅದರಂತೆಯೇ ವೇದ ಕಾಲದ 7 ಪವಿತ್ರ ಜೀವನದಿಗಳಲ್ಲಿ ಒಂದಾಗಿರುವ ದಕ್ಷಿಣದ ಗಂಗೆ ಕಾವೇರಿಯ ರಕ್ಷಣೆಗಾಗಿ ಕಾವೇರಿ ಮತ್ತು ಅದರ ಉಪನದಿಗಳಿಗೆ ತುರ್ತಾಗಿ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.

ನದಿಯ ಉಳಿವಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನವನ್ನು ನೀಡುವದು ಉತ್ತಮವೆನ್ನುವದನ್ನು ಪುಷ್ಠೀಕರಿಸಿದ ನಾಚಪ್ಪ, ನ್ಯೂಜಿಲ್ಯಾಂಡ್ ದೇಶವು ಅಲ್ಲಿನ ಮೂಲನಿವಾಸಿ ‘ಮಹೋರಿ’ ಬುಡಕಟ್ಟು ಜನರ ಸಂಸ್ಕøತಿಯಲ್ಲಿ ಬೆರೆತಿರುವ ‘ವಂಗಾನುಹಿ’ ನದಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ ನೀಡುವ ಮೂಲಕ ಇಂತಹ ಕ್ರಮ ಕೈಗೊಂಡ ಜಗತ್ತಿನ ಮೊಟ್ಟಮೊದಲ ರಾಷ್ಟ್ರವಾಗಿದೆ. ಆ ನಂತರ ಭಾರತದಲ್ಲಿ ಮೂರು ನದಿಗಳಿಗೆ ಜೀವಂತ ಮನುಷ್ಯನ ಸ್ಥಾನಮಾನವನ್ನು ಕಲ್ಪಿಸಲಾಯಿತು.

ಇದೇ ರೀತಿ ಕೊಡವ ಬುಡಕಟ್ಟು ಸಮೂಹದ ಪೂರ್ವಜಳಾದ ಜೀವನದಿ ‘ಕಾವೇರಿ’ಗೂ ‘ಲಿವಿಂಗ್ ಎಂಟಿಟಿ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ದಿ ಲೀಗಲ್ ಪರ್ಸನ್’ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿರುವದಾಗಿ ತಿಳಿಸಿದರು.

ತಮ್ಮ ಬೇಡಿಕೆಯ ಈಡೇರಿಕೆಗಾಗಿ ರಾಷ್ಟ್ರಪತಿಗಳು ತುರ್ತು ಸುಗ್ರೀವಾಜ್ಞೆಯನ್ನು ಹೊರಡಿಸಬೇಕೆಂದು ಮನವಿ ಮಾಡಿದ ನಾಚಪ್ಪ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಮಂತ್ರಿ ರಾಜನಾಥ್‍ಸಿಂಗ್ ಅವರು ಕೇಂದ್ರ ಶಾಸನವನ್ನು ಮುಂದಿನ ಅಧಿವೇಶನದಲ್ಲಿ ತರುವ ಮೂಲಕ ಕಾವೇರಿಯ ಸಂರಕ್ಷಣೆÉಗೆ ಮುಂದಾಗಬೇಕೆಂದರು.

ಸಿಎನ್‍ಸಿ ಸಂಘಟನೆ ತನ್ನ ಬೇಡಿಕೆಗಳ ಮನವಿ ಪತ್ರಗಳನ್ನು ಕೇಂದ್ರ ಜಲ ಸಂಪನ್ಮೂಲ ಮಂತ್ರಿ ಸಾಧ್ವಿ ಉಮಾಭಾರತಿ, ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಅಂಟಾನಿಯೊ ಗುಟರೆಸ್, ಯುನೆಸ್ಕೊ ಡೈರೆಕ್ಟರ್ ಜನರಲ್ ಐರಿನಾ ಬೊಕಾವೊ, ಯುಎನ್‍ಹೆಚ್‍ಆರ್‍ಸಿ ಹೈ ಕಮೀಷನರ್ ಪ್ರಿನ್ಸ್ ಝಾಹೀದ್‍ರಾದ್-ಆಲ್-ಹುಸೈನ್, ಭಾರತದ ಸರ್ವೋಚ್ಛ ನ್ಯಾಯಮೂರ್ತಿಗಳಾದ ಜೆ.ಎಸ್. ಖೆಹಾರ್‍ರವರಿಗೆ ಸುಪ್ರೀಂ ಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಮೂಲಕ ಮತ್ತು ಅಂತರ್ರಾಷ್ಟ್ರೀಯ ಜಲವಿವಾದ ನ್ಯಾಯ ಮಂಡಳಿ ಅಧ್ಯಕ್ಷರಿಗೆ ಕಳುಹಿಸಿ ಕೊಡಲಾಗಿದೆ ಎಂದು ನಾಚಪ್ಪ ತಿಳಿಸಿದರು.

ರಾಜಕೀಯ ಲಾಭಕ್ಕಾಗಿ ಕೆಲವರು ಕಾವೇರಿ ನದಿಯ ಮೇಲಿನ ಅಭಿಮಾನವನ್ನು ತೋರ್ಪಡಿಸುತ್ತಿದ್ದು, ಇದನ್ನು ಖಂಡಿಸುವದಾಗಿ ಹೇಳಿದರು. ಕೊಡವ ಲ್ಯಾಂಡ್ ಬೇಡಿಕೆಯನ್ನು ಈಡೇರಿಸಬೇಕು, ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಬೇಕು ಸೇರಿದಂತೆ ಸಿಎನ್‍ಸಿ ಸಂಘಟನೆಯ ವಿವಿಧ ಬೇಡಿಕೆಗಳ ಬಗ್ಗೆ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘÀಟನೆಯ ಪ್ರಮುಖರಾದ ಪುಲ್ಲೇರ ಕಾಳಪ್ಪ, ಚಂಬಾಂಡ ಜನತ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.