ಮಡಿಕೇರಿ, ಮೇ 30: ಅಖಿಲ ಭಾರತ ಔಷಧ ವ್ಯಾಪಾರ ಬಂದ್ ಕರೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹೋರಾಟಕ್ಕೆ ಬೆಂಬಲ ಸೂಚಿಸಿ ಜಿಲ್ಲೆಯಲ್ಲಿ ಔಷಧಿ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಸಾರ್ವಜನಿಕರಿಗೆ ಇದರಿಂದ ಯಾವದೇ ರೀತಿಯಲ್ಲಿ ಹೆಚ್ಚಿನ ಸಮಸ್ಯೆಗಳು ತಲೆದೋರಿಲ್ಲ. ಆನ್‍ಲೈನ್ ಮೂಲಕ ಔಷಧ ವ್ಯಾಪಾರ ಮಾಡಲು ಸರಕಾರ ಅವಕಾಶ ಕಲ್ಪಿಸಿರುವದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಹಾಗೂ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಹಿನ್ನೆಲೆಯಲ್ಲಿ ಔಷಧ ವ್ಯಾಪಾರ ಬಂದ್ ಮಾಡಲಾಗಿತ್ತು.

ಬೇಡಿಕೆಗಳು : ಆನ್‍ಲೈನ್ ಮೂಲಕ ಔಷಧ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಆನ್‍ಲೈನ್‍ಗಳಲ್ಲಿ ಯಾವದೇ ಅಡೆತಡೆಗಳಿಲ್ಲದೆ ಮಾರಾಟವಾಗುವ ಮಾದಕ ಹಾಗೂ ಪ್ರತಿಬಂಧಕ ವಸ್ತುಗಳಿಂದಾಗಿ ಯುವ ಪೀಳಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ತಡೆಗಟ್ಟಬೇಕು, ಕಳಪೆ ಗುಣಮಟ್ಟದ ಔಷಧ ಹಾಗೂ ಔಷಧದ ಬಳಕೆಯ ವಿಧಿ ವಿಧಾನದ ಮಾಹಿತಿಯ ಕೊರತೆಯಿಂದ ರೋಗಿಯ ಮೇಲೆ ಉಂಟಾಗುವ ಮಾರಕ ಪರಿಣಾಮಗಳನ್ನು ತಡೆಗಟ್ಟಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಜೀವರಕ್ಷಕ ಔಷಧಿಗಳ ಕೊರತೆಯನ್ನು ನೀಗಿಸಬೇಕು, ಸುಮಾರು 8.5 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಸ್ಥರು ಮತ್ತು ಇದೇ ಉದ್ಯಮವನ್ನು ನಂಬಿ ಬದುಕುತ್ತಿರುವ 50 ಲಕ್ಷಕ್ಕೂ ಹೆಚ್ಚಿನ ನೌಕರರು ಹಾಗೂ ಅವರ ಕುಟುಂಬ ವರ್ಗದ ಉಳಿವಿಗೆ ಸರಕಾರ ಕ್ರಮ ಕೈಗೊಳ್ಳಬೇಕು, ಫಾರ್ಮಸಿಸ್ಟ್ ಹಾಗೂ ಔಷಧ ಪರವಾನಗಿ ನವೀಕರಣದಲ್ಲಿ ಇರುವ ಗೊಂದಲವನ್ನು ನಿವಾರಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ಔಷಧ ವ್ಯಾಪಾರ ಬಂದ್ ಮಾಡಲಾಗಿತ್ತು.

ಸಮಸ್ಯೆ ತಲೆದೋರಿಲ್ಲ : ಶ್ರೀರಂಗಪ್ಪ

ಔಷಧ ವ್ಯಾಪಾರ ಬಂದ್ ಹಿನ್ನೆಲೆಯಲ್ಲಿ ಯಾವದೇ ಸಮಸ್ಯೆಗಳು ತಲೆದೋರಿಲ್ಲ ಮತ್ತು ಅಂತಹ ಯಾವದೇ ದೂರು ಬಂದಿಲ್ಲ ಎಂದು ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಅಧಿಕಾರಿ ಡಾ. ಶ್ರೀರಂಗಪ್ಪ ಪತ್ರಿಕೆಗೆ ತಿಳಿಸಿದರು. ಕುಶಾಲನಗರ ಆರೋಗ್ಯ ಕೇಂದ್ರಲ್ಲಿ ತಡರಾತ್ರಿವರೆಗೂ ಔಷಧ ಕೇಂದ್ರ ತೆರೆದಿಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಕ ಡಾ. ಅಬ್ದುಲ್ ಅಜೀಜ್ ಔಷಧ ವ್ಯಾಪಾರ ಬಂದ್‍ನಿಂದಾಗಿ ಯಾವದೇ ಸಮಸ್ಯೆಯಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ತುರ್ತು ಹಿನ್ನೆಲೆಯಲ್ಲಿ ಔಷಧಿಗಳು ದಾಸ್ತಾನಿದೆ ಎಂದು ಹೇಳಿದರು.