ಕೂಡಿಗೆ, ಮೇ 31: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಉತ್ತಮವಾಗಿ ಬೆಳೆಯುತ್ತಿದ್ದು, ಯುವಕರು ಸೇರಿದಂತೆ ಅನೇಕ ಕಾರ್ಯಕರ್ತರು ಜೆಡಿಎಸ್ ಬಲವರ್ಧನೆಗೊಳಿಸುವಲ್ಲಿ ತೊಡಗಿದ್ದಾರೆ. ಪಕ್ಷದ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಬಿ.ಎ. ಜೀವಿಜಯ ಗೆಲವು ಸಾಧಿಸಲು ಕಾರ್ಯಕರ್ತರು ಪಣತೊಡಬೇಕು ಎಂದು ಜಿಲ್ಲಾ ಜೆಡಿಎಸ್ ಉಸ್ತುವಾರಿ ವಿ.ಎಂ. ವಿಜಯ ಹೇಳಿದರು.

ಕೂಡಿಗೆಯಲ್ಲಿ ನಡೆದ ಗ್ರಾಮಮಟ್ಟದ ಬೂತ್ ಸಮಿತಿ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮೂಲಕ ಜೀವಿಜಯ ಕಾಂಗ್ರೆಸ್‍ನತ್ತ ಒಲವು ತೋರಿದ್ದಾರೆ ಎಂದು ಕೆಲವರು ಮನಬಂದಂತೆ ಹೇಳಿಕೆ ನೀಡುತ್ತಿರುವದು ಸರಿಯಲ್ಲ. ಇಂತಹ ಊಹಾಪೋಹಗಳಿಗೆ ಕಿವಿಗೊಡದೆ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಬೇಕು ಎಂದು ಕಾರ್ಯಕರ್ತರ ಸಭೆಯಲ್ಲಿ ವಿಜಯ ಹೇಳಿದರು.

ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ಬೆಂಬಲಿತ ಸಹಕಾರ ಸಂಸ್ಥೆಯ ನಿರ್ದೇಶಕರುಗಳು, ಗ್ರಾ.ಪಂ. ಸದಸ್ಯರುಗಳು ಇದ್ದರು.