ಸೋಮವಾರಪೇಟೆ, ಮೇ 31: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂ. 5 ರಂದು ಇಲ್ಲಿನ ವಕ್ಕಲಿಗರ ಸಮುದಾಯ ಭವನದಲ್ಲಿ ನಡೆಯುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಚಂದ್ರಶೇಖರ ಮಲ್ಲೋರಹಟ್ಟಿ ಅವರನ್ನು ಕಸಾಪ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು. ಪ್ರಸ್ತುತ ಚಿತ್ರದುರ್ಗದಲ್ಲಿ ನೆಲೆಸಿರುವ ಚಂದ್ರಶೇಖರ ಅವರ ಮನೆಗೆ ತೆರಳಿದ ಕಸಾಪ ಪದಾಧಿಕಾರಿಗಳು ಆಹ್ವಾನ ಪತ್ರಿಕೆ, ಫಲ-ತಾಂಬೂಲ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.

ಈ ಸಂದರ್ಭ ಮಾತನಾಡಿದ ಮಲ್ಲೋರಹಟ್ಟಿ ಅವರು, ಸಾಹಿತ್ಯ ಕ್ಷೇತ್ರದ ಸೇವೆ ಗುರುತಿಸಿ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜೆ. ಜವರಪ್ಪ, ಪದಾಧಿಕಾರಿ ಗಳಾದ ಡಿ.ಪಿ. ಲೋಕೇಶ್, ಎಸ್.ಡಿ. ವಿಜೇತ್ ಅವರುಗಳು ಸಮ್ಮೇಳನಾಧ್ಯಕ್ಷ ರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.