ಶ್ರೀಮಂಗಲ, ಜೂ. 3: ಕಳೆದ 8 ದಿನಗಳಿಂದ ಕಾನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಸ್ಪಂದನೆ ನೀಡದಿರುವದನ್ನು ತೀವ್ರವಾಗಿ ಖಂಡಿಸಿರುವ ಈ ಭಾಗದ ಗ್ರಾಮಸ್ಥರು ಹಾಗೂ ಭಾರತೀಯ ಕಿಸಾನ್ ಸಂಘ ಮುಂದಿನ 3 ದಿನಗಳ ಒಳಗೆ ಕೆಟ್ಟುನಿಂತಿರುವ ಟ್ರಾನ್ಸ್‍ಫಾರ್ಮರ್ ಮತ್ತು ಬಿದ್ಯುತ್ ಕಂಬಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸದೇ ಇದ್ದಲ್ಲಿ ಗೋಣಿಕೊಪ್ಪಲು ಎ.ಇ.ಇ. ಕಚೇರಿ ಮುಂದೆ ಈ ಭಾಗದ ಎಲ್ಲಾ ನಾಗರಿಕರು ಹಾಗೂ ಸಂಘ ಸಂಸ್ಥೆಗಳನ್ನು ಒಳಗೊಂಡು ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವದು ಎಂದು ಗ್ರಾಮದ ಪ್ರಮುಖರು ಎಚ್ಚರಿಸಿದ್ದಾರೆ.

ಪೊನ್ನಂಪೇಟೆ, ಕಾನೂರು, ವಡ್ಡರಮಾಡು ಗ್ರಾಮದ ಭತ್ತದ ಗದ್ದೆಗಳ ಮುಖಾಂತರ ಹಾದುಹೊಗಿರುವ 11 ಕೆವಿ ವಿದ್ಯುತ್ ತಂತಿಗಳು ಮಳೆಗಾಲಕ್ಕೆ ಮೊದಲೇ ಸಾಕಷ್ಟು ಕಡೆಗಳಲ್ಲಿ ಭಾಗಿ ನಿಂತಿವೆÉ. ಲಕ್ಷ್ಮಣ ನದಿ ಈ ಭಾಗದಲ್ಲಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಪ್ರವಾಹದ ಭೀತಿಯೊಂದಿಗೆ ಬಾಗಿ ನಿಂತಿರುವ ಕಂಬಗಳು ಧರೆಗೆ ಉರುಳಿದರೆ ಮನುಷ್ಯರಿಂದ ಹಿಡಿದು ಪ್ರಾಣಿಪಕ್ಷಿಗಳ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿಯಾಗಿದೆ. ಕಳೆದ ಸಾಲಿನಲ್ಲಿ ದುರಸ್ತಿ ಮಾಡಿದರೂ ಮತ್ತೆ ಕಂಬಗಳು ಭಾಗಿ ನಿಂತಿರುವದು ಇಲಾಖೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ ಎಂದು ಪ್ರಮುಖರು ಆಕ್ರೋಷ ವ್ಯಕ್ತಪಡಿಸಿದರು.

ಕಳೆದ 8 ದಿನಗಳಿಂದ ಸುಮಾರು 100-150 ಮನೆಗಳಿಗೆ ವಿದ್ಯುತ್ ತೊಂದರೆಯಾಗಿದೆ. ಕಾನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 300-400 ಕುಟುಂಬಗಳಿಗೆ ನೀರನ್ನು ಒದಗಿಸಲಾಗದೆ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ದೂರವಾಣಿ ಸಂಪರ್ಕವನ್ನು ಕಳೆದುಕೊಳ್ಳು ವಂತಾಗಿದೆ. ಇದನ್ನು ಸರಿಪಡಿಸುವಂತೆ ಬಾಳೆಲೆ ಜೂನಿಯರ್ ಇಂಜಿನಿಯರ್ ಸೋಮೇಶ್ ಅವರಿಗೆ ಸಾರ್ವಜನಿಕರು, ಕಾನೂರು ಗ್ರಾ.ಪಂ. ಹಾಗೂ ಕಾನೂರು ದೂರವಾಣಿ ಕೇಂದ್ರದಿಂದಲೂ ದೂರು ನೀಡಿದರೂ ಇದುವರೆಗೆ ಕ್ರಮಕೈಗೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ತೊಂದರೆಯಾದರೆ 72 ಗಂಟೆಗಳ ಒಳಗೆ ದುರಸ್ತಿ ಮಾಡಬೇಕೆಂಬ ಕಾನೂನಿದ್ದು, ಇದಕ್ಕೆ ತಪ್ಪಿದರೆ ಇಲಾಖೆ ಪ್ರತಿ ಗ್ರಾಹಕರಿಗೆ ಪ್ರತಿ ದಿನ ರೂ. 50 ರಂತೆ ಹಣ ಪಾವತಿ ಮಾಡಬೇಕು ಎಂಬ ನಿಯಮವಿದ್ದು, ಇದನ್ನು ಕೂಡಲೇ ಇಲಾಖೆಯವರು ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದÀರ್ಭ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷÀ ಅಳಮೇಂಗಡ ವಿವೇಕ್ ಅಯ್ಯಪ್ಪ, ಉಪಾಧ್ಯಕ್ಷ ಮಣಿ ನಂಜಪ್ಪ, ಸೇವಾ ಸಂಘದ ಅಧ್ಯಕ್ಷ ಕೇಚÀಮಾಡ ದಿನೇಶ್, ಬುಡ್‍ಕಣಿ ಸಂಘದ ಕಾರ್ಯದರ್ಶಿ ಪೊರಂಗಡ ಬೋಪಣ್ಣ, ಕೋದೇಂಗಡ ನರೇಂದ್ರ, ಚೆಪ್ಪುಡಿರ ಕೃಪ, ಚಿರಿಯಪಂಡ ಡ್ಯಾನಿ ಪೊನ್ನಪ್ಪ, ಬಸಪ್ಪ, ಚೊಟ್ಟೆಕ್‍ಮಾಡ ರಾಬಿನ್, ಬಿದ್ದಪ್ಪ, ಕಟ್ಟೆಂಗಡ ಸುಜಿ, ಕೇಚಮಾಡ ವಿಶ್ವಾಸ್, ರಾಕೇಶ್, ಚೇಂದಿರ ಮೊಣ್ಣಪ್ಪ ಹಾಜರಿದ್ದರು.