ಮಡಿಕೇರಿ, ಜೂ. 3: ಮಹಿಳೆಯೋರ್ವಳನ್ನು ಹತ್ಯೆಗೈದಿದ್ದ ಆರೋಪದಡಿ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಜೀವಾವಧಿ ಶಿಕ್ಷೆಗೊಳಗಾಗಿದ್ದ ಖೈದಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.ಒಂದು ವರ್ಷದÀ ಹಿಂದೆ ಗೊಂದಿಬಸವನಹಳ್ಳಿ ಗ್ರಾಮದ ವಿಚ್ಚೇದಿತ ಮಹಿಳೆ ಕವಿತಾ ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ಅದೇ ಗ್ರಾಮದ ಸಹೋದರರಾದ ಜಾನ್ಸನ್ ಹಾಗೂ ಜಿ.ಟಿ. ಜಗ್ಗ ಸೇರಿ ಹತ್ಯೆಗೈದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆರೋಪಿಗಳಿಬ್ಬರ ಪೈಕಿ ಜಿ.ಟಿ. ಜಗ್ಗ (35) ಇಂದು ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿ ದ್ದಾನೆ. ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟ ದಿನದಿಂದಲೇ ಜಗ್ಗ ಚಿಂತಾಕ್ರಾಂತ ನಾಗಿದ್ದ ಎನ್ನಲಾಗಿದ್ದು, ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ಜೈಲು ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿ ವೈದ್ಯರು ಈತ ಮೃತಪಟ್ಟಿದ್ದಾಗಿ ದೃಢಪಡಿಸಿದ್ದು, ನ್ಯಾಯಾಂಗ ಅಧಿಕಾರಿಗಳ ಸಮಕ್ಷಮ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿ ಸಲಾಯಿತು.