ಮಡಿಕೇರಿ, ಜೂ. 7: ಕೊಡಗು ಗೌಡ ಫೆಡರೇಷನ್‍ನೊಂದಿಗೆ ಎಲ್ಲ ಅರೆಭಾಷಿಕ ಗೌಡ ಸಮುದಾಯ ಹಾಗೂ ಒಕ್ಕಲಿಗ ಸಮೂಹದವರು ವಿಲೀನಗೊಳ್ಳುವ ಬಗ್ಗೆ ಸಂಬಂಧಪಟ್ಟ ಪ್ರಮುಖರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ನಿನ್ನೆ ಕೊಡಗು ಗೌಡ ಒಕ್ಕೂಟ (ಫೆಡರೇಶನ್) ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರ ಉಪಸ್ಥಿತಿಯಲ್ಲಿ ಸೋಮವಾರಪೇಟೆಯಲ್ಲಿ ಸಭೆ ನಡೆಸಿರುವ ಪ್ರಮುಖರು, ಎಲ್ಲಾ ಭಾಷಿಕ ಗೌಡ ಸಮುದಾಯಗಳವರು ಏಕ ವೇದಿಕೆಯಡಿ ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಲು ಸಮ್ಮತಿಸಿದ್ದಾಗಿ ಸೋಮಣ್ಣ ಖಚಿತಪಡಿಸಿದ್ದಾರೆ.ಈ ಮಹತ್ವದ ಸಭೆಯಲ್ಲಿ ಜನಾಂಗದ ಹಿರಿಯರಾದ ಮಾಜಿ ಸಚಿವ ಬಿ.ಎ. ಜೀವಿಜಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಮೊದಲಾದವರು ಪಾಲ್ಗೊಂಡಿದ್ದಾಗಿ ಸೂರ್ತಲೆ ಸೋಮಣ್ಣ ‘ಶಕ್ತಿ'ಗೆ ಮಾಹಿತಿ ನೀಡಿದ್ದಾರೆ.