ಕೂಡಿಗೆ, ಜೂ.7: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹಾರಂಗಿ ವಾರ್ಡ್‍ನ ಸದಸ್ಯ ಬಿ.ಬಾಸ್ಕರ್‍ನಾಯಕ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರುಗಳಿಗೆ ಶೌಚಾಲಯ

ನಿರ್ಮಿಸಲು ಅರ್ಜಿ ಸಲ್ಲಿಸಿದ್ದರೂ, ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಎದುರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸಿದರು.

ಗ್ರಾ.ಪಂ ವ್ಯಾಪ್ತಿಯ ಹುಲುಗುಂದ(ಹಾರಂಗಿ) ಗ್ರಾಮದಲ್ಲಿ ಶೌಚಾಲಯ ಇಲ್ಲದ 30 ಕುಟುಂಬದ ಸದಸ್ಯರು ಗ್ರಾ.ಪಂಗೆ ಶೌಚಾಲಯ ನಿರ್ಮಿಸಲು ಅರ್ಜಿಗಳನ್ನು ಸಲ್ಲಿಸಿದರು. ಆದರೆ, ಅರ್ಜಿಗಳ ವಿಲೇವಾರಿಯೂ ಆಗದೆ, ಮಾಸಿಕ ಸಭೆಯಲ್ಲಿ ಚರ್ಚೆ ನಡೆದಿದ್ದು, ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಬಾಸ್ಕರ್‍ನಾಯಕ್ ಆರೋಪಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವ್ಥದ್ಧಿ ಅಧಿಕಾರಿ ಸ್ಥಳಕ್ಕೆ ತೆರಳಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ವಾರ್ಡುಗಳಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸುತ್ತ ಬಂದಿರುತ್ತೇವೆ. ಹಾರಂಗಿ ವಾರ್ಡ್‍ನಲ್ಲಿ ಮೂವತ್ತು ಅರ್ಜಿಗಳನ್ನು ಎರಡು ದಿನಗಳ ಹಿಂದೆ ತಲಪಿಸಿರುತ್ತಾರೆ. ಇವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ಅಭಿವೃದ್ಧಿ ಅಧಿಕಾರಿ ಆಯಿಷಾ ತಿಳಿಸಿದರು.