ವೀರಾಜಪೇಟೆ, ಜೂ. 9: ವಿದ್ಯಾರ್ಥಿಗಳು ಶಿಸ್ತು ಪ್ರಾಮಾಣಿ ಕತೆಯನ್ನು ಮೈಗೂಡಿಸಿಕೊಂಡು ಛಲದಿಂದ ಗುರಿ ಮುಟ್ಟುವಂತಾದರೆ ಮುಂದೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಹೇಳಿದರು.

ವೀರಾಜಪೇಟೆ ಸಮೀಪದ ಬಿಳುಗುಂದ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ರೂ. 3,31,000 ವೆಚ್ಚದಲ್ಲಿ ಅಕ್ಷರ ದಾಸೋಹದ ನೂತನ ಕೊಠಡಿ ಯನ್ನು ಉದ್ಘಾಟಿಸಿ ತಮ್ಮ ತಂದೆ ದಿ. ಕಾವೇರಪ್ಪ ಹಾಗೂ ತಾಯಿ ದಿ. ಪಾರ್ವತಿ ತಂಗಮ್ಮ ಅವರ ಜ್ಞಾಪಕಾರ್ಥ ದತ್ತಿ ನಿಧಿಯಾಗಿ ರೂ. 10,000 ದ ಚೆಕ್ ನೀಡಿ ಮಾತನಾಡಿದರು.

ಬಿಳುಗುಂದ ಗ್ರಾಮ ಪಂಚಾಯಿತಿ ಸದಸ್ಯ ಚಿಲ್ಲವಂಡ ಕಾವೇರಪ್ಪ ಮಾತನಾಡಿ,ಗುರು-ಹಿರಿಯರಿಗೆ ಗೌರವ ನೀಡಿ ವಿದ್ಯಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎ. ಮುಸ್ತಫಾ ಮಾತನಾಡಿ, ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿ ಗಳು ಕನ್ನಡ ಅಕ್ಷರ ಕಲಿಯುವ ಕಡು ಬಡ ಮಕ್ಕಳು. ಇಂತಹವರಿಗೆ ಅಕ್ಷರ ದಾಸೊಹ ಉತ್ತಮ ಯೋಜನೆ ಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಐನಂಡ ಪ್ರತಾಪ್, ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ತಮ್ಮಯ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಮಜೀದ್, ದಾನಿಗಳಾದ ಬಿ.ಹೆಚ್. ಕಲಿಮುಲ್ಲಾ ಖಾನ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಗ್ರಾ.ಪಂ. ಸದಸ್ಯರಾದ ವಸಂತಿ, ಗೊಂಬೆ, ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಬಿ.ಯು. ರಾಧ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್. ಬಿಂದು ಸ್ವಾಗತಿಸಿ, ಶಿಕ್ಷಕಿ ಹೆಚ್.ಜಿ. ಸಾವಿತ್ರಿ ನಿರೂಪಿಸಿದರೆ, ಕಿರಣ್ ಕುಮಾರ್ ವಂದಿಸಿದರು.