ವೀರಾಜಪೇಟೆ, ಜೂ. 10 : ದೆಹಲಿಯಲ್ಲಿರುವ ಸಿ.ಪಿ.ಐ.(ಎಂ) ಪಕ್ಷದ ಮುಖ್ಯ ಕಚೇರಿಯಲ್ಲಿ ಸಿ.ಪಿ.ಐ.ಎಂ ರಾಷ್ಟ್ರ ನಾಯಕ ಸೀತರಾಂ ಯೆಚೊರಿಯ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವೀರಾಜಪೇಟೆ ಸಿ.ಪಿ.ಐ.ಎಂ. ಕಾರ್ಯಕರ್ತರು ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸಿ.ಪಿ.ಐ.ಎಂ ನ ಜಿಲ್ಲಾ ಸಮಿತಿ ಮುಖಂಡ ಡಾ. ಐ.ಆರ್. ದುರ್ಗಪ್ರಸಾದ್ ಮಾತನಾಡಿ, ಸಂವಿಧಾನದ ಆಶಯಗಳಾದ ಸಮಾನತೆ, ಜಾತ್ಯಾತೀತತೆ, ಸಾಮಾಜಿಕ ನ್ಯಾಯಗಳು ಇಂದು ಕೇಂದ್ರದ ಬಿ.ಜೆ.ಪಿ. ಸರ್ಕಾರದ ಆಳ್ವಿಕೆಯಲ್ಲಿ ಅರ್ಥಹೀನವಾಗಿವೆÉ. ದಲಿತ ಸಮುದಾಯಗಳ ಮೇಲೆ ಹಲ್ಲೆ ನಡೆಸುತ್ತಿರುವ ಸಂಘ ಪರಿವಾರದ ಸಂಘಟನೆಯಿಂದ ಬಿ.ಜೆ.ಪಿ.ಯ ಬಣ್ಣ ಬಯಲಾಗಿದೆ ಎಂದು ದುರ್ಗಾಪ್ರಸಾದ್ ದೂರಿದರು.

ಸಿ.ಪಿ.ಐ.ಎಂ ಕಾರ್ಯದರ್ಶಿ ಶಾಜಿ ರಮೇಶ್ ಪ್ರಮುಖ ಕಾರ್ಯಕರ್ತರುಗಳಾದ ಹೆಚ್.ಆರ್.ಶಿವಪ್ಪ, ಶ್ರೀಧರ್, ಪದ್ಮಿನಿ, ಹಮೀದ್, ಬಾಬುಟ್ಟಿ, ಕಾಶೀಂ, ಖಾಲಿದ್, ಮುಂತಾದವರು ಭಾಗವಹಿಸಿದ್ದರು.