*ಸಿದ್ದಾಪುರ, ಜೂ. 10: ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಟ್ಟೆಮಾಡುವಿನ ಕಟ್ಟೆಮನೆ ಸಿದ್ಧಾರ್ಥ ಎಂಬವರ ತೋಟದಲ್ಲಿ ಕಾರ್ಮಿಕರನ್ನು ಕೊಂಡೊಯ್ದು ಕೆಲಸ ಮಾಡಿಸುತ್ತಿದ್ದ ಅಭ್ಯತ್‍ಮಂಗಲ ಜ್ಯೋತಿನಗರ ನಿವಾಸಿ ಮಂಜು (32) ಎಂಬಾತ ಅದೇ ತೋಟದಿಂದ ಕರಿಮೆಣಸು ಕಳವು ಮಾಡಿದ್ದ. ಈ ಬಗ್ಗೆ ಏಪ್ರಿಲ್ 3ರಂದು ದೂರು ದಾಖಲಾಗಿತ್ತಾದರೂ ಆರೋಪಿ ಸಿಕ್ಕಿರಲಿಲ್ಲ. ತನಿಖೆ ಕೈಗೊಂಡಿದ್ದ ಪೊಲೀಸರು ಇಂದು ಮಂಜುವನ್ನು ಬಂಧಿಸಿ, ಆತನಿಂದ ಕರಿಮೆಣಸು, ಕರಿಮೆಣಸನ್ನು ಸಾಗಿಸಿದ್ದ ಮಾರುತಿ ಓಮ್ನಿ (ಕೆಎ -12, ಎಂ-6129) ಅನ್ನು ವಶಪಡಿಸಿಕೊಂಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶಿವಪ್ರಕಾಶ್, ಸಿಬ್ಬಂದಿಗಳಾದ ತೀರ್ಥ, ಇಬ್ರಾಹಿಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.