ಸಿದ್ದಾಪುರ, ಜೂ. 10 : ಡೆಂಗ್ಯೂ ಜ್ವರಕ್ಕೆ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಮೂಲತಃ ಚಿತ್ರದುರ್ಗ ಜಿಲ್ಲೆಯ ನಿವಾಸಿ ರಮೇಶ (34) ಎಂಬಾತ ಆತನ ಕುಟುಂಬದೊಂದಿಗೆ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಸೇತುವೆಯ ಬಳಿ ಗದ್ದೆಯಲ್ಲಿ ಟೆಂಟ್ ಹಾಕಿಕೊಂಡು ವಾಸಮಾಡಿಕೊಂಡಿದ್ದನು. ರಮೇಶನು ತನ್ನ ಕುಟುಂಬದವರೊಂದಿಗೆ ಸೇರಿಕೊಂಡು ಚರಂಡಿ ನಿರ್ಮಾಣದ ಕೆಲಸ ಮಾಡಿಕೊಂಡಿದ್ದು, ಕಳೆದ ಕೆಲವು ದಿನಗಳ ಹಿಂದೆ ರಮೇಶನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಸಂದರ್ಭ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಆದರೆ ಜಿಲ್ಲಾಸ್ಪತ್ರೆಗೆ ತೆರಳದ ರಮೇಶನಿಗೆ ಮಾರನೇ ದಿನ ಹೊಟ್ಟೆನೋವು ಹೆಚ್ಚಾದ ಕಾರಣ ಮತ್ತೊಮ್ಮೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದು, ಸಿದ್ದಾಪುರದಿಂದ ತುರ್ತುಚಿಕಿತ್ಸಾ ವಾಹನದ ಮೂಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂದರ್ಭ ಡೆಂಗ್ಯೂ ಜ್ವರ ಇರುವದು ಖಚಿತಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಹಿಂದೆ ಸಾವನ್ನಪ್ಪಿರುವದಾಗಿ ವರದಿಯಾಗಿದೆ. ಮೃತ ರಮೇಶನು ಮದ್ಯವ್ಯಸನಿಯಾಗಿದ್ದರೂ, ಜ್ವರ ಇದ್ದರೂ ಕೂಡ ಮದ್ಯ ಸೇವಿಸಿದ್ದಾನೆ ಎನ್ನಲಾಗಿದೆ. ರಮೇಶನ ಮೃತದೇಹವನ್ನು ಆತನ ಊರಿಗೆ ಸಾಗಿಸಲಾಗಿದೆ. ಮೃತ ರಮೇಶನು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.