ಶನಿವಾರಸಂತೆ, ಜೂ. 10: ‘ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವದೇ ದೇವರ ಸೇವೆ’ ಎಂದು ಹಾಸನ ಜಿಲ್ಲಾ, ಅರೆಮಾದನ ಹಳ್ಳಿಯ ಸುಜ್ಞಾನ ಪ್ರಭುಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಕಾಳಿಕಾಂಬ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಾಲಕರಿಗೆ 8 ವರ್ಷದೊಳಗೆ ಉಪನಯನ ಆಗಬೇಕು. ಸಕಾಲದಲ್ಲಿ ಸಂಸ್ಕಾರದ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಶ್ವಕರ್ಮ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಜಿ. ದೇವದಾಸ್ ಮಾತನಾಡಿ, ದೇವಾಲಯ ಹಾಗೂ ಭಕ್ತರ ನಡುವೆ ಅವಿನಾಭಾವ ಸಂಬಂಧವಿದೆ. ಸಂಸ್ಕಾರ, ಸಂಸ್ಕøತಿಯನ್ನು ಯುವಜನರು ಅರಿಯಬೇಕು ಎಂದರು.

ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ತಾಲೂಕು ಪಂಚಾಯಿತಿ ಸದಸ್ಯ ಹೆಚ್.ಬಿ. ಕುಶಾಲಪ್ಪ, ರಾಜ್ಯ ವಿಶ್ವಕರ್ಮ ಸಮಾಜದ ಜಿಲ್ಲಾ ನಿರ್ದೇಶಕ ವಿ. ಕುಮಾರ್, ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಬಿ.ಸಿ. ಅಶೋಕ್ ಮಾತನಾಡಿದರು.

ಸಮಾಜದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಕೆ.ಎಲ್. ಲಕ್ಷ್ಮಣಾಚಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್, ಕುಶಾಲನಗರ ವಿಶ್ವಕರ್ಮ ಸಮಾಜದ ಲಲಿತಾ ವರದರಾಜ್, ಸಹದೇವ್, ನಾಗರಾಜ್, ಮೂರ್ತಿ, ಕೆ.ಬಿ. ಸುಬ್ರಹ್ಮಣ್ಯ, ಜಿ.ಜಿ. ಅರ್ಪಿತಾ ಉಪಸ್ಥಿತರಿದ್ದರು.