ಭಾಗಮಂಡಲ, ಜೂ. 12: ಸೂಕ್ಷ್ಮ ಪರಿಸರ ತಾಣವನ್ನು ವಿರೋಧಿಸುವದರೊಂದಿಗೆ ಗ್ರಾ.ಪಂ. ಗುರುತಿಸಿದ ಜಾಗದಲ್ಲಿಯೇ ಕಸವಿಲೇವಾರಿ ಘಟಕಕ್ಕೆ ಅನುಮತಿ ನೀಡುವಂತೆ ಭಾಗಮಂಡಲ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದೇ ವೇಳೆ ಸೂಕ್ಷ್ಮ ಪರಿಸರ ತಾಣವನ್ನು ವಿರೋಧಿಸಿ ಗ್ರಾಮಸಭೆಗೆ ಮೆರವಣಿಗೆ ಮೂಲಕ ಆಗಮಿಸಿದ ಸಾರ್ವಜನಿಕರು, ಅಧಿಕಾರಿಗಳು ಸಭೆಗೆ ಸರಿಯಾದ ಸಮಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ದ್ವಾರದ ಬಳಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ವಿಶೇಷ ಗ್ರಾಮಸಭೆ ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಭಾಗಮಂಡಲ ಸಂತೆಮಾಳದಲ್ಲಿ ಸೇರಿ ಮಳೆಯಲ್ಲಿಯೇ ಘೋಷಣೆಗಳನ್ನು ಕೂಗುತ್ತಾ ಆಗಮಿಸಿದರು. ಭಾಗಮಂಡಲ - ಕರಿಕೆ ದ್ವಾರದ ಬಳಿ ಬರುತ್ತಿದ್ದಂತೆ ಸಭೆಗೆ ಅಧಿಕಾರಿಗಳು ಬಾರದಿರುವದನ್ನು ಅರಿತ ಪ್ರತಿಭಟನಾಕಾರರು ಅಲ್ಲಿಯೇ ರಸ್ತೆ ತಡೆಗೆ ಮುಂದಾದರು. ಪೊಲೀಸ್ ಅಧಿಕಾರಿಗಳು ರಸ್ತೆ ತಡೆ ನಡೆಸದಂತೆ ಪ್ರತಿಭಟನಾಕಾರರ ಮನವೊಲಿಸಿದರೂ ಪಟ್ಟುಬಿಡದೆ ರಸ್ತೆ ತಡೆ ಮುಂದುವರೆಸಿದರು. ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಬಳಿಕ ಆಗಮಿಸಿದ ಅಧಿಕಾರಿಗಳು 12 ಗಂಟೆಗೆ ಸಭೆ ಆರಂಭಿಸಿದ ನಂತರ ಪ್ರತಿಭಟನಾಕಾರರು ಸಭೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ವಕೀಲ ಸುನೀಲ್ ಪತ್ರಾವೋ ಮಾತನಾಡಿ ಪರಿಸರವಾದಿಗಳು ಅಧಿಕಾರಿಗಳನ್ನು ದಾರಿತಪ್ಪಿಸುವ ಮೂಲಕ ಸೂಕ್ಷ್ಮ ಪರಿಸರ ತಾಣದ ಸಮಸ್ಯೆ ಉದ್ಭವವಾಗಿದೆ. ರೈತರ ನೋವು ಅರ್ಥ ಮಾಡಿಕೊಂಡು ಘೋಷಣೆಯಾಗಿಸುವ ಆದೇಶವನ್ನು ಕೈಬಿಡಲು ಅಧಿಕಾರಿಗಳು ಒತ್ತಡ ಹೇರಬೇಕೆಂದು ಆಗ್ರಹಿಸಿದರು.

(ಮೊದಲ ಪುಟದಿಂದ) ಕುಡಿಯರ ಮುತ್ತಪ್ಪ ಮಾತನಾಡಿ, ಸಂಸ್ಕøತಿಯ ನಾಡಿನಲ್ಲಿ ಇಂದು ಅರಣ್ಯ ಇಲಾಖೆಯ ಯೋಜನೆಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಿದೆ. ಮುಂದೆ ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳ ಬಳಕೆಗೂ ತೊಂದರೆಯಾಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಕೃಷಿಕರ ಪರ ನಿಂತು ಯೋಜನೆಯನ್ನು ಕೈಬಿಡಬೇಕು ಎಂದರು.

ಹೊಸೂರು ಸತೀಶ್ ಕುಮಾರ್ ಮಾತನಾಡಿ, ಸೂಕ್ಷ್ಮ ಪರಿಸರ ತಾಣದಿಂದಾಗಿ ಕೃಷಿಗೆ ರಾಸಾಯನಿಕ ಗೊಬ್ಬರ ಬಳಕೆಗೂ ತೊಂದರೆಯಾಗಲಿದೆ. ತಲಕಾವೇರಿ- ಕರಿಕೆ ರಸ್ತೆಗಳಲ್ಲಿ ಸಂಚಾರಕ್ಕೂ ಅಡಚಣೆಯಾಗಬಹುದು. ನಿತ್ಯ ಜೀವನಕ್ಕೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಅರಣ್ಯದಂಚಿನಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆ ಹಕ್ಕುಪತ್ರಕ್ಕಾಗಿ 3500ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಹಕ್ಕುಪತ್ರ ದೊರೆತಿಲ್ಲ. ಇನ್ನು ಮುಂದೆ ಸಿಗಬಹುದೇ? ಅರಣ್ಯ ಇಲಾಖೆಗೆ ಮನುಷ್ಯರ ರಕ್ಷಣೆ ಮುಖ್ಯನಾ ಅಥವಾ ಪ್ರಾಣಿಗಳ ರಕ್ಷಣೆ ಮುಖ್ಯನಾ ಎಂದು ಪ್ರಶ್ನಿಸಿದರು.

ಅಯ್ಯಂಗೇರಿ ಗ್ರಾ.ಪಂ. ಸದಸ್ಯ ಮನೋಜ್ ಮಾತನಾಡಿ, 300-400 ಇಂಚು ಮಳೆ ಬೀಳುವ ಪ್ರದೇಶವನ್ನು ಸೂಕ್ಷ್ಮ ಪರಿಸರ ಘೋಷಣೆ ಮಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಸೂಕ್ಷ್ಮ ಪರಿಸರ ತಾಣದಿಂದ ಜಮೀನುಗಳಿಗೆ ಬೆಲೆ ಕಡಿಮೆಯಾಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲವೂ ಕಡಿಮೆಯಾಗಲಿದೆ ಎಂದು ಹೇಳಿದರು.

ಕುದುಕುಳಿ ಭರತ್ ಮಾತನಾಡಿ ಸೂಕ್ಷ್ಮ ಪರಿಸರ ತಾಣದಿಂದಾಗಿ ರಾಷ್ಟ್ರೀಯ ಹಾಗೂ ರಾಜ್ಯಹೆದ್ದಾರಿಗೆ ತೊಡಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಮಾತನಾಡಿ, ಸೂಕ್ಷ್ಮ ಪರಿಸರ ತಾಣದ ಯೋಜನೆಯನ್ನು ಹಿಂಪಡೆಯಬೇಕು. ಸೂಕ್ಷ್ಮಪರಿಸರ ತಾಣಕ್ಕೆ ಸಂಬಂಧಿಸಿದ ಸಮಿತಿಯ ಸಭೆಯ ತೀರ್ಮಾನವನ್ನು ಕಾದುನೋಡಿ ಮುಂದಿನ ಹೋರಾಟವನ್ನು ರೂಪಿಸಲಾಗುವದು. ಜಯ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು.

ಗ್ರಾ.ಪಂ. ಗುರುತಿಸಿದ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ. ಮುಂದೆ ನಡೆದಾಡಲು ಬಿಡುವರೇ ಎಂದು ಪ್ರಶ್ನಿಸಿದ ಅವರು, ಕಸವಿಲೇವಾರಿ ಘಟಕಕ್ಕೆ 8 ತಿಂಗಳಾದರೂ ಅನುಮತಿ ನೀಡಿಲ್ಲ. ಇನ್ನು ನೀಡದಿದ್ದಲ್ಲಿ ಅರಣ್ಯ ಇಲಾಖೆಯ ಮುಂದೆ ಕಸ ಸುರಿಯುತ್ತೇವೆಂದು ಎಚ್ಚರಿಸಿದರು. ಇದಕ್ಕೆ ಸಾರ್ವಜನಿಕರು ಧ್ವನಿಗೂಡಿಸಿ ಕೋರಂಗಾಲದಲ್ಲಿ ಅಂಗನವಾಡಿ, ಮನೆ, ನದಿಗಳು ಹರಿಯುವದರಿಂದ ಸಮಸ್ಯೆಯಾಗಲಿದೆ. ತಣ್ಣಿಮಾನಿ ಯಲ್ಲಿಯೇ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಗ್ರಹಿಸಿದರು.

ಅಮೆ ಬಾಲಕೃಷ್ಣ, ಸೂಕ್ಷ್ಮ ಪರಿಸರ ತಾಣವನ್ನು ವಿರೋಧಿಸಿ ಮಾತನಾಡಿದರು. ಡಿಎಫ್‍ಓ ಜಯ ಮಾತನಾಡಿ ರೈತರ ನೋವು ಅರ್ಥವಾಗಿದೆ. ಸೂಕ್ಷ್ಮ ಪರಿಸರ ತಾಣ ಅರಣ್ಯ ಇಲಾಖೆ ಬೌಂಡರಿಯಿಂದ 1 ಕಿ.ಮೀ. ದೂರ ಮಾತ್ರ ಘೋಷಣೆಯಾಗಿದೆ. ಇದರಿಂದ ರೈತರಿಗೆ ತೊಂದರೆ ಇಲ್ಲ. ಇಂದಿನ ಸಭೆಯ ನಿರ್ಣಯ ಮತ್ತು ವಿರೋಧವನ್ನು ಸಮಿತಿಯ ನಿರ್ಣಯವನ್ನು ಮೇಲಾಧಿಕಾರಿಗಳಿಗೆ ನೀಡಲಾಗುವದು ಎಂದರು.

ತಹಶೀಲ್ದಾರ್ ಕುಸುಮಾ ಮಾತನಾಡಿ, ಸಿ ಅಂಡ್ ಡಿ ಜಮೀನಿನಲ್ಲಿರುವವರಿಗೆ ಸರ್ಕಾರದ ನಿರ್ದೇಶನದಂತೆ ಹಕ್ಕುಪತ್ರ ವಿತರಿಸಲಾಗುವದು ಎಂದರು.

ಸೂಕ್ಷ್ಮ ಪರಿಸರ ತಾಣಕ್ಕೆ ವಿರೋಧ ಹಾಗೂ ಕಸ ವಿಲೇವಾರಿ ಘಟಕವನ್ನು ತಣ್ಣಿಮಾನಿಯಲ್ಲಿಯೇ ಸ್ಥಾಪಿಸಲು ನಿರ್ಣಯವನ್ನು ಓದಿದ ನಂತರ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಗಿರೀಶ್, ಜಿ.ಪಂ. ಸದಸ್ಯರಾದ ಕವಿತಾ ಪ್ರಭಾಕರ್, ಕುಮಾರ್ ಹಾಗೂ ಗ್ರಾ.ಪಂ. ಸದಸ್ಯರು ಮತ್ತಿತರರು ಇದ್ದರು.