ಕುಶಾಲನಗರ, ಜೂ. 12: ನಿವೇಶನ ರಹಿತ ಮಧ್ಯಮ ವರ್ಗದ ಜನತೆಗೆ ಗುಂಡೂರಾವ್ ಬಡಾವಣೆಯ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಕುಶಾಲನಗರ ಪಟ್ಟಣ ಪಂಚಾಯಿತಿ ನಿರ್ಣಯ ಕೈಗೊಂಡಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಐಡಿಎಸ್‍ಎಂಟಿ ಯೋಜನೆಯಡಿ ಗುಂಡೂರಾವ್ ಬಡಾವಣೆಯಲ್ಲಿನ ನಿವೇಶನಗಳನ್ನು ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ಹಂಚುವ ನಿಟ್ಟಿನಲ್ಲಿ ಯೋಜನೆಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕೈಗೊಳ್ಳಲು ಸಭೆ ತೀರ್ಮಾನಿಸಿತು.

ಕಳೆದ ಮಾಸಿಕ ಸಭೆಯಲ್ಲಿ ಪಾರ್ಕ್ ಒತ್ತುವರಿ ವಿಚಾರವನ್ನು ಚರ್ಚಿಸಲು ವಿಶೇಷ ಸಭೆ ಕರೆಯುವ ಬಗ್ಗೆ ಕೈಗೊಂಡಿದ್ದ ನಿರ್ಧಾರದಂತೆ ಇದುವರೆಗೆ ಸಭೆ ಕರೆಯದಿರುವ ಬಗ್ಗೆ ಸದಸ್ಯರಾದ ಹೆಚ್.ಜೆ. ಕರಿಯಪ್ಪ ಅಧ್ಯಕ್ಷರಲ್ಲಿ ಮಾಹಿತಿ ಬಯಸಿದರು. ನಮೂನೆ-3 ವಿತರಿಸುವಲ್ಲಿ ವಿಳಂಭ ಉಂಟಾಗುತ್ತಿರುವದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಎದುರಾಗಿದೆ ಎಂದರು.