*ಸಿದ್ದಾಪುರ, ಜೂ. 13: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿನಗರದ ತೋಟದಲ್ಲಿ ಆನೆಮರಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಜ್ಯೋತಿನಗರ ಬಳಿಯ ತೋಟಂಬೈಲು ಶ್ಯಾಂ ಬೆಳ್ಯಪ್ಪ ಅವರಿಗೆ ಸೇರಿದ ಅಡಿಕೆ ತೋಟದ ಚರಂಡಿಯಲ್ಲಿ ಕೆಸರಿನಲ್ಲಿ ಹುದುಗಿ ಸಾವನ್ನಪ್ಪಿರುವ ಅಂದಾಜು 3 ವರ್ಷ ಪ್ರಾಯದ ಹೆಣ್ಣಾನೆ ಮರಿಯ ಕಳೇಬರ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಆನೆ ಮರಿ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.

ಈ ವ್ಯಾಪ್ತಿಯಲ್ಲಿ ಆನೆ ಉಪಟಳ ಅಧಿಕವಾಗಿದ್ದು, ಮರಿ ಹಾಕಿ ತೋಟದಲ್ಲಿಯೇ ಬೀಡು ಬಿಟ್ಟಿವೆ. ಸ್ಥಳಕ್ಕೆ ಮೀನುಕೊಲ್ಲಿ ವಲಯ ಅರಣ್ಯಾಧಿಕಾರಿ ಬಾನಂಡ ದೇವಿ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯ ಡಾ. ಉಮಾಶಂಕರ್ ಹಾಗೂ ಡಾ. ಕರುಂಬಯ್ಯ ಅವರುಗಳು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೇಬರವನ್ನು ಅಲ್ಲಿಯೇ ಸಂಸ್ಕಾರ ಮಾಡಲಾಯಿತು.