ಸೋಮವಾರಪೇಟೆ, ಜೂ. 13: ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವ ಸಮೀಪದ ಬೀಟಿಕಟ್ಟೆ-ಬಸವನಕೊಪ್ಪ ರಸ್ತೆಯ ಗುಂಡಿಗಳಿಗೆ ಬಾಳೆಗಿಡಗಳನ್ನು ನೆಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಬಸವನಕೊಪ್ಪ-ಶನಿವಾರಸಂತೆ-ಶುಂಠಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಮನವಿ ಮಾಡಿ ಸುಸ್ತಾದ ಗ್ರಾಮಸ್ಥರು, ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಬೃಹತ್ ಗುಂಡಿಗಳಿಗೆ ಬಾಳೆಗಿಡಗಳನ್ನು ನೆಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ರಸ್ತೆಯನ್ನು ಹಲವು ಬಾರಿ ದುರಸ್ತಿಗೊಳಿಸುವಂತೆ ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ತಾ.ಪಂ., ಜಿ.ಪಂ., ಶಾಸಕರುಗಳನ್ನು ಕೇಳಿಕೊಂಡಿದ್ದರೂ ಸ್ಪಂದನ ಮಾತ್ರ ಶೂನ್ಯವಾಗಿದೆ. ಮಳೆಗಾಲವಾದ್ದರಿಂದ ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಗ್ರಾಮದ ಪ್ರಮುಖ ನವೀನ್ ದೂರಿದರು.