ಕುಶಾಲನಗರ, ಜೂ. 13: ಆಧುನಿಕ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳಿಗೆ ವಿರುದ್ಧವಾಗಿ ವೃದ್ಧಾಶ್ರಮಗಳು ಕಾರ್ಯಾಚರಣೆ ನಡೆಸುತ್ತಿರುವದು ವಿಷಾದಕರ ಸಂಗತಿ ಎಂದು ಬಿಸಿಎಂ ಅಧಿಕಾರಿ ಕೆ.ವಿ. ಸುರೇಶ್ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 51ನೇ ಹುಟ್ಟಹಬ್ಬದ ಅಂಗವಾಗಿ ಕ.ರ.ವೇ. ವತಿಯಿಂದ ಕೂಡಿಗೆ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡ ಸಹಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕೂಡ ಹಿರಿಯರನ್ನು ಗೌರವಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಮುಪ್ಪನ್ನು ಅನುಭವಿಸಲೇಬೇಕಿದೆ. ವೃದ್ಧಾಪ್ಯ ಸಂದರ್ಭ ನೆಮ್ಮದಿಯ ನೆಲೆಯನ್ನು ಹುಡುಕುವ ಪರಿಸ್ಥಿತಿಗೆ ಸಿಲುಕುವಂತಾಗಬಾರದು ಎಂದರು.

ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು, ಹಿರಿಯ ನಾಗರಿಕ ಎಂ.ಬಿ. ಜಯಂತ್, ವೃದ್ಧಾಶ್ರಮದ ವ್ಯವಸ್ಥಾಪಕ ಬಿ.ಎಸ್. ಚಂದ್ರು, ಕರವೇ ಪ್ರಮುಖರಾದ ಸತೀಶ್ ಮತ್ತಿತರರು ಇದ್ದರು.