ಮಡಿಕೇರಿ, ಜೂ. 15: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಗಸ್ಟ್ 20 ರಂದು ಮಡಿಕೇರಿಯಲ್ಲಿ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಪತ್ರಕರ್ತರ ಸಂಘದ ನಿರ್ದೇಶಕ ಸುವರ್ಣ ಮಂಜು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.

ಮುದ್ರಣ ಹಾಗೂ ದೃಶ್ಯ ಮಾಧ್ಯಮ ಛಾಯಾಗ್ರಾಹಕರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಮೂರು ವಿಭಾಗದಲ್ಲಿ ಛಾಯಾಗ್ರಹಣ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮ ಆಯೋಜಿಸಲು ವಿವಿಧ ಸಮಿತಿ ರಚಿಸಲಾಯಿತು. ಸಂಚಾಲಕರನ್ನಾಗಿ ಜೀವನ್ ಪಾಲೇಕಾಡ್, ಸಹ ಸಂಚಾಲಕರಾಗಿ ಲಕ್ಷ್ಮೀಶ್, ಗೌರವಾಧ್ಯಕ್ಷರನ್ನಾಗಿ ಸುವರ್ಣ ಮಂಜು, ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನೇಶ್ ಭೂತನಕಾಡು, ಕ್ರೀಡಾ ಸಮಿತಿ ಸಂಚಾಲಕರನ್ನಾಗಿ ದಿವಾಕರ್, ಪ್ರಚಾರ ಸಮಿತಿ ಸಂಚಾಲಕರನ್ನಾಗಿ ನವೀನ್ ಸುವರ್ಣ, ಊಟೋಪಚಾರ ಸಮಿತಿ ಅಧ್ಯಕ್ಷರನ್ನಾಗಿ ಕೆ.ಬಿ. ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಖಜಾಂಚಿ ಸವಿತಾ ರೈ, ರಾಜ್ಯ ಸಂಘದ ನಿರ್ದೇಶಕ ಬಾಚರಣಿಯಂಡ ಅನು ಕಾರ್ಯಪ್ಪ, ಜಿಲ್ಲಾ ಸಂಘದ ನಿರ್ದೇಶಕ ಕೆ.ಬಿ. ಮಂಜುನಾಥ್ ಮತ್ತಿತರರಿದ್ದರು.