ಮಡಿಕೇರಿ, ಜೂ. 15: ಇಲ್ಲಿಗೆ ಸಮೀಪದ ಕಡಗದಾಳು ಗ್ರಾಮದ ತುರ್ಕರಟ್ಟಿ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್‍ನ ಹಿಂಬದಿ ಸವಾರ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿ ದ್ದಾರೆ. ಮೂರ್ನಾಡುವಿನ ಲಿಂಗಪ್ಪ (52) ಎಂಬವರೇ ಮೃತ ದುರ್ದೈವಿ ಯಾಗಿದ್ದಾರೆ.ಕಡಗದಾಳುವಿನಲ್ಲಿ ಸಂಬಂಧಿಕರ ಸಾವಿಗೆ ತೆರಳಿ ಹಿಂದಿರುಗುತ್ತಿದ್ದ ಮೂರ್ನಾಡುವಿನ ತನು ತಮ್ಮಯ್ಯ (32) ಎಂಬವರು ಚಾಲಿಸುತ್ತಿದ್ದ ಸ್ಕೂಟರ್ ಹೋಂಡಾ ಆ್ಯಕ್ಟಿವ (ಕೆಎ 12 ಕ್ಯು-2733) ತುರ್ಕರಟ್ಟಿ ಎಂಬಲ್ಲಿ ಸಿದ್ದಾಪುರ ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ಖಾಸಗಿ ಬಸ್ (ಕೆಎ 55, 6882)ನ್ನು ಹಿಂದಿಕ್ಕುವ ಧಾವಂತದಲ್ಲಿ ರಸ್ತೆಯಲ್ಲಿ ಹರಡಿದ್ದ ಮರಳಿನಲ್ಲಿ ಹತೋಟಿ ತಪ್ಪಿ ನೆಲಕ್ಕುರುಳಿದೆ. ಈ ಸಂದರ್ಭ ಸ್ಕೂಟರ್‍ನ ಹಿಂಬದಿ ಸವಾರ ಲಿಂಗಪ್ಪ ಎಂಬವರ ತಲೆಯ ಮೇಲೆ ಬಸ್‍ನ ಚಕ್ರ ಹರಿದು ಗಂಭೀರ ವಾದ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಲಿಂಗಪ್ಪ ಅವರ ಮೆದುಳು ಹೊರಬಂದಿದ್ದು, ರಸ್ತೆಯಲ್ಲಿ ಹರಡಿದೆ. ಸ್ಕೂಟರ್ ಸವಾರ ತನು ತಮ್ಮಯ್ಯ ಅವರಿಗೆ ಮುಖ, ಕಿವಿಗೆ ಸಣ್ಣಪುಟ್ಟ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಲಿಂಗಪ್ಪ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.