ಮಡಿಕೇರಿ, ಜೂ. 23: ಪ್ರಧಾನಮಂತ್ರಿ ಫಸಲ್ ಭೀಮಾ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಅನುಷ್ಠಾನ ಗೊಳಿಸುವ ಕುರಿತು ವಿವಿಧ ಬ್ಯಾಂಕಿನ ವ್ಯವಸ್ಥಾಪಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಪ್ರಸಕ್ತ ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ (ಕಾಳುಮೆಣಸು ಮತ್ತು ಅಡಿಕೆ) ವಿಮೆಗೆ ಹೆಸರು ನೋಂದಾಯಿಸಲು ತಾ. 30 ಕಡೆ ದಿನವಾಗಿದೆ. ಹಾಗೆಯೇ ಪ್ರಧಾನಮಂತ್ರಿ ಫಸಲ್ ಭೀಮಾ (ಭತ್ತ, ಮುಸುಕಿನ ಜೋಳ) ಯೋಜನೆಯಡಿ ಹೆಸರು ನೋಂದಾಯಿಸಲು ಜುಲೈ 15 ಕೊನೆಯ ದಿನವಾಗಿದೆ. ಆದ್ದರಿಂದ ರೈತರಿಗೆ ಮಾಹಿತಿ ನೀಡಿ ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶ್ರಮಿಸುವಂತೆ ಬ್ಯಾಂಕರ್ಸ್‍ಗಳು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಭೀಮಾ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸುವಂತಾಗಲು ಹೆಚ್ಚಿನ ಮಾಹಿತಿ ಒದಗಿಸಬೇಕಿದೆ ಎಂದರು.

ಕಳೆದ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಾಯಿತ ಸುಮಾರು 3900 ರೈತರಲ್ಲಿ 1070 ರೈತರು ಬೆಳೆ ನಷ್ಟದ ವಿಮಾ ಪರಿಹಾರಕ್ಕಾಗಿ ಆಯ್ಕೆ ಯಾಗಿದ್ದು, ವಿಮಾ ಯೋಜನೆಯು ರೈತ ಸ್ನೇಹಿಯಾಗಿದೆ ಎಂಬ ಬಗ್ಗೆ ರೈತರಲ್ಲಿ ಮನವರಿಕೆ ಮಾಡುವದರ ಜೊತೆಗೆ ವಿಮಾ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗ ಬೇಕಿದೆ ಎಂದು ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕರು ಸಲಹೆ ಮಾಡಿದರು.

ಪ್ರಧಾನಮಂತ್ರಿ ಫಸಲ್ ಭೀಮಾ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯ ಬ್ಯಾಂಕುಗಳು ಎಲ್ಲಾ ರೀತಿಯ ಸಹಕಾರ ನೀಡಲಿವೆ ಎಂದು ಮುಂಡಂಡ ಸಿ. ನಾಣಯ್ಯ ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ, ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಮಾಹಿತಿ ನೀಡಿದರು. ಅದರಂತೆ ಕೊಡಗು ಜಿಲ್ಲೆಯಲ್ಲಿ ಈ ಯೋಜನೆಯನ್ನು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅಡಿಕೆ (ಭಾಗಮಂಡಲ, ಸಂಪಾಜೆ, ಅಮ್ಮತ್ತಿ, ಪೊನ್ನಂಪೇಟೆ ಮತ್ತು ಶ್ರೀಮಂಗಲ) ಮತ್ತು ಕಾಳುಮೆಣಸು (ಜಿಲ್ಲೆಯ 16 ಹೋಬಳಿ ವ್ಯಾಪ್ತಿಯಲ್ಲಿ) ಬೆಳೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಳೆವಾರು ರೈತರ ವಿವರಗಳನ್ನು ಆನ್‍ಲೈನ್ ಪೋರ್ಟಲ್ (sಚಿmಡಿಚಿಞshಚಿಟಿe. ಞಚಿಡಿಟಿಚಿಣಚಿಞಚಿ.gov.iಟಿ) ಮೂಲಕ ನೋಂದಾಯಿಸಬಹುದಾಗಿದೆ. ಕೊಡಗು ಜಿಲ್ಲೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜಿಐಸಿ, ಲಿಮಿಟೆಡ್ ಅಧಿಕೃತ ವಿಮಾ ಸಂಸ್ಥೆಯಾಗಿದೆ. ರೈತರು ತಮ್ಮ ಹತ್ತಿರದ ಬ್ಯಾಂಕ್‍ಗಳಲ್ಲಿ ಅಗತ್ಯ ಮಾಹಿತಿ ನೀಡಿ ವಿಮಾ ಯೋಜನೆಡಿ ನೋಂದಾಯಿಸಿ ಕೊಳ್ಳಬೇಕಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಕೋರಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಅವರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಳೆದ ವರ್ಷದ ಭತ್ತ ಬೆಳೆಗೆ ವಿಮೆ ಪಾವತಿಸಲು ಸಂಬಂಧಿಸಿದ ವಿಮಾ ಕಂಪೆನಿಗೆ ಸುಮಾರು ರೂ. 27 ಲಕ್ಷ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್, ಬ್ಯಾಂಕುಗಳ ವ್ಯವಸ್ಥಾಪಕರು ಹಲವು ಮಾಹಿತಿ ನೀಡಿದರು.