ಮಡಿಕೇರಿ, ಜೂ. 23: ಮಂಜಿನ ನಗರಿ ಮಡಿಕೇರಿಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್, ಹಾರರ್ ಕಥಾನಕವನ್ನೊಳಗೊಂಡ ‘ಅಜ್ಜ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು, ಇನ್ನಿತರೆಡೆ ಚಿತ್ರೀಕರಣ ಮುಗಿದಿದ್ದು, ಇದೀಗ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗಿದೆ.ಪ್ರಶಸ್ತಿ ವಿಜೇತ ಹಿರಿಯ ನಟ ದತ್ತಾತ್ರೇಯ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ನಿರ್ಮಾಪಕರಾಗಿರುವ ಮೈಸೂರಿನ ವಕೀಲ ಕೆ.ಪಿ. ಚಿದಾನಂದ ಅವರ ಪುತ್ರಿ ಪ್ರಥ್ವಿಶ್ರೀ ಮೊಮ್ಮಗಳಾಗಿ ನಟಿಸುತ್ತಿದ್ದು, ಇವರಿಬ್ಬರ ಪಾತ್ರಗಳ ನಡುವೆ ಕಥಾಹಂದರ ಅಡಗಿದೆ. ಪಾಳು ಬಂಗಲೆಯೊಳಗೆ ನಡೆಯುವ ನಿಗೂಢ ಕೊಲೆಯ ಸನ್ನಿವೇಶ ಚಿತ್ರದ ಹೈಲೈಟ್.

ಮಹದೇಶ್ವರ ಅಟ್ರ್ಸ್ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್‍ರಾವ್ ನಿರ್ದೇಶಿಸುತ್ತಿದ್ದಾರೆ. ರಾಜು ಸಿರಾಳ್‍ಕೊಪ್ಪ ಅವರ ಕ್ಯಾಮರಾ ಕೈ

(ಮೊದಲ ಪುಟದಿಂದ) ಚಳಕದಲ್ಲಿರುವ ಚಿತ್ರದಲ್ಲಿ ದತ್ತಾತ್ರೇಯ ಅವರೊಂದಿಗೆ ಸಹ ನಾಯಕ ನಟರುಗಳಾಗಿ ಹೊಸ ಪ್ರತಿಭೆಗಳಾದ ದೀಪಕ್ ಹಾಗೂ ಪ್ರವೀಣ್, ನಾಯಕಿಯರುಗಳಾಗಿ ಮಾಧುರಿ ಹಾಗೂ ಅಶ್ವಿನಿ ಅವರುಗಳಿದ್ದಾರೆ.

ಚಿತ್ರದಲ್ಲಿ ಜಿಲ್ಲೆಯ ಕಲಾವಿದರುಗಳು ಪಾತ್ರಧಾರಿಗಳಾಗಿದ್ದಾರೆ. ತಾಳತ್‍ಮನೆಯ ಲತೇಶ್ ಪೂಜಾರಿ ಖಳನಾಯಕನ ಪಾತ್ರದಲ್ಲಿದ್ದರೆ, ‘ಶಕ್ತಿ’ ಉಪಸಂಪಾದಕ ಕುಡೆಕಲ್ ಸಂತೋಷ್ ಕಂಟ್ರಾಕ್ಟರ್ ಪಾತ್ರದಲ್ಲಿ, ಚಾಲನ್ 24ನ ಚಂಡಿರ ಮನೋಜ್ ಸಹ ಕಂಟ್ರಾಕ್ಟರ್ ಆಗಿ, ಟಿ.ವಿ. 1ನ ಚೆರಿಯಮನೆ ಗಾಯತ್ರಿ ವಿದ್ಯಾರ್ಥಿಯಾಗಿ, ನರ್ಸರಿ ವಸಂತ ವಕೀಲನಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ವಕೀಲ ನಂಜಪ್ಪ ಹಾಗೂ ಅಶ್ವಿನಿ ಜ್ಯುವೆಲ್ಲರಿಯ ಸುರೇಶ್ ಅವರುಗಳ ಮನೆಯಲ್ಲಿ ಚಿತ್ರೀಕರಣ ನಡೆದಿದೆ. ತಾ. 29 ರವರೆಗೆ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಯಲಿದ್ದು, ನಾಲ್ಕುನಾಡು ಅರಮನೆಯಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.