ಶ್ರೀಮಂಗಲ, ಜೂ. 24: ಕೊಡಗು ಜಿಲ್ಲಾ ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕಿನ ಆಡಳಿತ ಕಚೇರಿಯನ್ನು ಪೊನ್ನಂಪೇಟೆಯಲ್ಲಿ ಸ್ಥಾಪಿಸಿದ್ದು, ತಾ. 27ರಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕೊಡಗು ಜಿಲ್ಲಾ ಸಂಘ ಚಾಲಕ ಚೆಕ್ಕೇರ ಮನು ಕಾರ್ಯಪ್ಪ ಉದ್ಘಾಟಿಸಲಿದ್ದಾರೆ ಎಂದು ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರವೀಣ್ ಭೀಮಯ್ಯ ತಿಳಿಸಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ವಿಚಾರ ತಿಳಿಸಿದ ಅವರು, ತಾ. 27ರಂದು ಪೂರ್ವಾಹ್ನ 10 ಗಂಟೆಗೆ ಕಚೇರಿ ಉದ್ಘಾಟನೆ ನಂತರ 11 ಗಂಟೆಗೆ ಕಚೇರಿಯಿಂದ ಪೊನ್ನಂಪೇಟೆ ಅರಣ್ಯ ಇಲಾಖೆಯ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿ ಕಾಡಾನೆ ಹಾವಳಿ ಶಾಶ್ವತ ತಡೆಗೆ ಮನವಿ ಪತ್ರ ಸಲ್ಲಿಸಲಾಗುವದು ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ಮಾಜಿ ಅಧ್ಯಕ್ಷ ಮಾಚಿಮಾಡ ಎಂ.ರವೀಂದ್ರ ಅವರು, ಇತ್ತೀಚಿನ ವರ್ಷಗಳಿಂದ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಹಾವಳಿಯಿಂದ ಎಷ್ಟೋ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಕಾಡಾನೆಗಳು ಕೂಡ ವಿದ್ಯುತ್ ತಂತಿಗಳಿಗೆ ಸಿಲುಕಿ ದುರ್ಮರಣಕ್ಕೀಡಾಗುತ್ತಿರುವದು ಸೇರಿದಂತೆ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆದು ಕಾರ್ಯಪ್ರವೃತ್ತರಾಗಲು ಸೂಚಿಸಿ ಹಲವು ಪ್ರಮುಖ ಅಂಶಗಳ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವದು ಎಂದು ಹೇಳಿದರು.

ಸಭೆಯಲ್ಲಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಉಪಾಧ್ಯಕ್ಷ ಚೊಟ್ಟೆಯಂಡಮಾಡ ಮಾದಪ್ಪ, ಪ್ರಧಾನ ಕಾರ್ಯದರ್ಶಿ ನೂರೇರ ಮನೋಜ್, ಉಪಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಪದಾಧಿಕಾರಿ ಚೋಡುಮಾಡ ವಿಕ್ರಮ್, ಜಿಲ್ಲಾ ಸದಸ್ಯ ಕೋಟೇರ ಕಿಶನ್ ಉತ್ತಪ್ಪ, ಮಾಪಣಮಾಡ ಪೊನ್ನಪ್ಪ, ಯುವ ಪ್ರಮುಖ್ ದೇಯಂಡ ರತನ್ ಬೋಪಣ್ಣ ಮತ್ತಿತರರು ಹಾಜರಿದ್ದರು.