ಮಡಿಕೇರಿ, ಜೂ. 24 : ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷರು ಪಕ್ಷದೊಳಗೆ ಹಿಟ್ಲರ್‍ನಂತೆ ವರ್ತಿಸುತ್ತಿದ್ದು, ಪಕ್ಷ ವಿನಾಶದಂಚಿಗೆ ತಲುಪಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೀನಾಯ ಪರಿಸ್ಥಿತಿಯ ಹೊಣೆ ಹೊತ್ತು ಪ್ರಬಾರ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು. ತಮಗೆ ಅಧಿಕಾರ ಬೇಡ ಎಂದು ಹೇಳಿಕೊಳ್ಳುವ ಪ್ರಬಾರ ಅಧ್ಯಕ್ಷರು ತಮ್ಮನ್ನೇ ಕಾಯಂ ಅಧ್ಯಕ್ಷರನ್ನಾಗಿ ಮಾಡುವಂತೆ ಕೆಪಿಸಿಸಿ ಮೇಲೆ ಒತ್ತಡ ಹೇರಲು ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಕೆಲವು ಪದಾಧಿಕಾರಿಗಳ ನಕಲಿ ಸಹಿಯನ್ನು ಬಳಸಲಾಗಿದೆ ಎಂದು ಆರೋಪಿಸಿದರು. ತಾಕತ್ತಿದ್ದರೆ ಪ್ರಬಾರ ಅಧ್ಯಕ್ಷರು ನನ್ನನ್ನು ಪಕ್ಷದಿಂದ ಅಮಾನತು ಮಾಡಲಿ ಎಂದು ಸವಾಲೆಸೆದ ಕೆ.ಎಂ.ಗಣೇಶ್, ನಾನಿನ್ನೂ ಬ್ಲಾಕ್ ಅಧ್ಯಕ್ಷ ಸ್ಥಾನದಲ್ಲಿದ್ದರೂ ಜೂ.28 ರಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯನ್ನು ನಡೆಸಲು ಜಿಲ್ಲಾ ಪ್ರಬಾರ ಅಧ್ಯಕ್ಷರು ಮುಂದಾಗಿದ್ದಾರೆ. ಈ ಸಭೆಯನ್ನು ನಡೆಸಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದರು.

ತನ್ನಿಂದಲೇ ಪಕ್ಷ ಎಂದು ಭಾವಿಸಿರುವ ಇವರಿಂದ ಅನೇಕ ಮಂದಿ ಬೇಸತ್ತಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ ಎನ್ನುವ ಕಾರಣಕ್ಕಾಗಿ ಎಲ್ಲರು ಸುಮ್ಮನಿದ್ದಾರೆ, ಅಧಿಕಾರ ಹೋದ ನಂತರ ಅಸಮಾಧಾನ ಸ್ಫೋಟಗೊಂಡು ತÀಮ್ಮ ಜೊತೆಯಲ್ಲಿ ಹಲವರು ಬರಲಿದ್ದಾರೆ ಎಂದು ಕೆ.ಎಂ.ಗಣೇಶ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಜಾತ್ಯತೀತ ನಾಯಕರೊಬ್ಬರ ಗೆಲುವಿಗಾಗಿ ಶ್ರಮಿಸುವದಾಗಿ ತಿಳಿಸಿದ ಅವರು, ಬಿಜೆಪಿಯಿಂದ ಹೊರತಾದ ಸಂಘಟನೆ ಬೆಳೆಯಲಿದೆ ಎಂದರು. ಜೂ.28 ರಂದು ನಡೆಯುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯ ನಂತರ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವದಾಗಿ ಸ್ಪಷ್ಟಪಡಿಸಿದ ಗಣೇಶ್, ನಗರಸಭೆಯಲ್ಲಿ ಸದಸ್ಯರುಗಳಾದ ಲೀಲಾಶೇಷಮ್ಮ, ಶ್ರೀಮತಿ ಬಂಗೇರ, ವೀಣಾಕ್ಷಿ ಹಾಗೂ ತಾವು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳುವದಾಗಿ ಹೇಳಿದರು.

ನಗರಸಭಾಧ್ಯಕ್ಷರು ಜನಪರವಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ತಮ್ಮ ಬೆಂಬಲವಿದೆ, ಉದ್ದೇಶ ಪೂರ್ವಕವಾಗಿ ನಮಗೆ ವಿರುದ್ಧವಾಗಿ ನಡೆದುಕೊಂಡರೆ ಅದಕ್ಕೆ ಉತ್ತರ ನೀಡಲು ನಾವು ಕೂಡ ಸಿದ್ಧರಿದ್ದೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಕಳೆದ ಆರು ತಿಂಗಳುಗಳಲ್ಲಿ ನಾಲ್ಕು ಸಭೆಗಳನ್ನು ನಡೆಸಿದ್ದೇನೆ. ಆದರೆ ನನ್ನನ್ನು ಪ್ರಬಾರ ಅಧ್ಯಕ್ಷರು ನಿಷ್ಕ್ರಿಯ ಎಂದು ಟೀಕೆ ಮಾಡಿದ್ದಾರೆ. ಪಕ್ಷದೊಳಗೆ ಇವರೆಷ್ಟು ಸಕ್ರೀಯರಾಗಿದ್ದಾರೆ ಎನ್ನುವದಕ್ಕೆ ಪಕ್ಷದ ಹೀನಾಯ ಸ್ಥಿತಿಯೇ ಸಾಕ್ಷಿಯಾಗಿದೆ ಎಂದು ಕೆ.ಎಂ.ಗಣೇಶ್ ಕುಟುಕಿದರು.

ಮಾಜಿ ಸಂಸದ ವಿಶ್ವನಾಥ್ ಅವರಿಂದ ಎಲ್ಲರೂ ಅಧಿಕಾರವನ್ನು ಪಡೆದಿದ್ದಾರೆ, ಪ್ರಬಾರ ಅಧ್ಯಕ್ಷ ಸ್ಥಾನ ಸಿಗಲು ಹಾಗೂ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾಗಲು ವಿಶ್ವನಾಥ್ ಅವರೇ ಕಾರಣಕರ್ತರಾಗಿ ದ್ದಾರೆ. ಆದರೆ ಅಧಿಕಾರ ಪಡೆದವರಿಗೆ ಕೃತಜ್ಞತಾಭಾವವಿಲ್ಲವೆಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಲೀಲಾಶೇಷಮ್ಮ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಕಾರ್ಯದರ್ಶಿ ಸುಖೇಶ್ ಚಂಗಪ್ಪ, ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಹಾಗೂ ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ಕರೀಂ ಉಪಸ್ಥಿತರಿದ್ದರು.