ಮಡಿಕೇರಿ, ಜೂ. 23: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಕೇವಲ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿರುವದು ಕಣ್ಣೊರೆಸುವ ತಂತ್ರವೆಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಟೀಕಿಸಿದ್ದಾರೆ. ರೈತರ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹಿಸುತ್ತಲೇ ಬಂದಿದ್ದರೂ, ಈಗ ಕೇವಲ 50 ಸಾವಿರ ಮನ್ನಾ ಮಾಡಿ ಚುನಾವಣಾ ಗಿಮಿಕ್ ತೋರಿದ್ದಾಗಿ ಅಭಿಪ್ರಾಯಪಟ್ಟರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ರಾಜ್ಯದಲ್ಲಿ ಟಿಪ್ಪು ಜಯಂತಿ ನೆಪದಲ್ಲಿ ಕೊಡಗು ಸಹಿತ ಎಲ್ಲೆಡೆ ಕೋಮು ಸಂಘರ್ಷ ಹುಟ್ಟು ಹಾಕಿದ್ದೆ ಸಿದ್ದರಾಮಯ್ಯ ಸರಕಾರವೆಂದು ಜರಿದ ಅವರು, ಇದೊಂದು ಸೂತಕದ ಆಡಳಿತವೆಂದು ವ್ಯಾಖ್ಯಾನಿಸುತ್ತಾ, ಆದಷ್ಟು ಬೇಗ ಈ ಸರಕಾರ ತೊಲಗಬೇಕೆಂದು ಹರಿಹಾಯ್ದರು.