ಕೂಡಿಗೆ, ಜೂ. 27: ಜೀವನದಲ್ಲಿ ಜಿಗುಪ್ಸೆ ಹೊಂದಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ.

ಇಲ್ಲಿನ ಕೂಲಿ ಕಾರ್ಮಿಕಳಾಗಿದ್ದ ಪುಟ್ಟಮ್ಮ (60) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮಕ್ಕಳಿಲ್ಲದ ಈಕೆ ಗಂಡನಿಂದ ದೂರಾಗಿ ಏಕಾಂಗಿಯಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಸೋಮವಾರ ರಾತ್ರಿ ತನ್ನ ಸ್ವಂತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ ಆಕೆಯ ಸಹೋದರ ಮಾದಾಪಟ್ಟಣದ ಅಣ್ಣಾಜಿ ಪುಟ್ಟಮ್ಮನ ಮನೆಗೆ ಬಂದಾಗ, ಪುಟ್ಟಮ್ಮ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದನ್ನು ನೋಡಿ ತಕ್ಷಣ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.