ಸೋಮವಾರಪೇಟೆ, ಜೂ. 27: ನಿನ್ನೆ ಸುರಿದ ಧಾರಾಕಾರ ಮಳೆಗೆ ತೇವಗೊಂಡಿದ್ದ ವಾಸದ ಮನೆಯೊಂದು ಇಂದು ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿಯಲ್ಲಿ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ರಾಜಮ್ಮ ಎಂಬವರಿಗೆ ಸೇರಿದ ವಾಸದ ಮನೆ ಗಾಳಿ-ಮಳೆಗೆ ಕುಸಿದು ಬಿದ್ದಿದೆ. ಘಟನೆ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ವಾಸದ ಮನೆಯ ಶೇ. 80 ರಷ್ಟು ಭಾಗ ಕುಸಿದು ಬಿದ್ದಿದ್ದು, ಅದರೊಳಗೆ ಮನೆ ಮಂದಿಯ ಬಟ್ಟೆ, ಪಾತ್ರೆಗಳು ಸಿಲುಕಿಕೊಂಡು ಕುಟುಂಬ ಬೀದಿಗೆ ಬರುವಂತಾಗಿದೆ. ರಾಜಮ್ಮ ಅವರ ಮಗ, ಸೊಸೆ ಮತ್ತು ಮೊಮ್ಮಗಳು ಮನೆಯಲ್ಲಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.