ಮಡಿಕೇರಿ, ಜೂ. 29 : ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಿಕೊಂಡು ಬರಲಾಗುತ್ತಿರುವ ಕ್ರಿಕೆಟ್ ಹಬ್ಬದ 2018ರ ಸಾರಥ್ಯವನ್ನು ಚೆರಿಯಮನೆ ಕುಟುಂಬಸ್ಥರು ವಹಿಸಿಕೊಂಡಿದ್ದು ಚೆರಿಯಮನೆ ಕ್ರಿಕೆಟ್ ಕಪ್ ನಡೆಯಲಿದೆ. ಈ ಸಂಬಂಧ ಚೆರಿಯಮನೆ ಕುಟುಂಬಸ್ಥರು ಬೆಟ್ಟತ್ತೂರಿನ ಐನ್‍ಮನೆಯಲ್ಲಿ ಪಟ್ಟೆದಾರರ ಸಮ್ಮುಖದಲ್ಲಿ ಪ್ರಥಮ ಪೂರ್ವಭಾವಿ ಸಭೆ ನಡೆಸಿ ಕ್ರೀಡಾ ಸಮಿತಿಯನ್ನು ರಚಿಸಿದ್ದಾರೆ.

ಸಮಿತಿ ಅಧ್ಯಕ್ಷರಾಗಿ ಡಾ. ರಾಮಚಂದ್ರ ,ಕಾರ್ಯದರ್ಶಿಯಾಗಿ ಮಾದಪ್ಪ, ಖಜಾಂಚಿಯಾಗಿ ಗಣೇಶ್ ಬೋಪಯ್ಯ, ಸಂಚಾಲಕರಾಗಿ ಪೆಮ್ಮಯ್ಯ ಹಾಗೂ ಶ್ರೀಕಾಂತ್ ಅವರುಗಳನ್ನು ಆಯ್ಕೆ ಮಾಡಲಾಯಿತಲ್ಲದೆ ನಿರ್ದೇಶಕರುಗಳನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಮಹಿಳೆಯರಾದಿಯಾಗಿ ಎಲ್ಲರೂ ಪಾಲ್ಗೊಂಡು ಆತಿಥ್ಯದ ಜವಾಬ್ದಾರಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಸೀತಮ್ಮ ಪ್ರಭಾಕರ್ ಪ್ರಾರ್ಥಿಸಿದರೆ, ಪೆಮ್ಮಯ್ಯ ಸ್ವಾಗತಿಸಿ, ನಿರೂಪಿಸಿದರು. ಮಾದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕೇಶವ ವಂದಿಸಿದರು.