ವೀರಾಜಪೇಟೆ, ಜು. 2: ಕೆದಮುಳ್ಳೂರಿನ ತೋರ ಗ್ರಾಮದ ಬಳಿಯ ಬಾರಿಕಾಡು ಎಂಬಲ್ಲಿ ಇಂದು ಬೆಳಿಗ್ಗೆ 7-30 ರ ಸಮಯದಲ್ಲಿ ಕೂಲಿ ಕಾರ್ಮಿಕ ಎರವರ ಚುಮ್ಮುಣಿ (55) ಎಂಬಾತನಿಗೆ ಒಂಟಿ ಸಲಗ ದಾಳಿ ನಡೆಸಿ ಗಂಭೀರ ಸ್ವರೂಪದ ಗಾಯಗೊಳಿಸಿರುವದಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪ್ರಕರಣವನ್ನು ದಾಖಲಿಸಿದ್ದಾರೆ.

ಗಾಯಾಳು ಚುಮ್ಮುಣಿ ಎಂದಿನಂತೆ ಮನೆಯಿಂದ ಕೂಲಿ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಸಲಗ ದಾಳಿ ನಡೆಸಿದ್ದರಿಂದ ಸೊಂಟ ಹಾಗೂ ಎದೆ ಭಾಗಕ್ಕೆ ಗಾಯ ಉಂಟಾಗಿರುವದಾಗಿ ಚುಮ್ಮುಣಿ ದೂರಿನಲ್ಲಿ ತಿಳಿಸಿದ್ದಾನೆ. ಚುಮ್ಮುಣಿಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆದಮುಳ್ಳೂರು, ಬೂದಿಮಾಳ, ತೋರ, ಪೆಗ್ಗರೆ ಕಾಡಿನಲ್ಲಿ ಒಂಟಿ ಸಲಗವೊಂದು ಹಾಡ ಹಗಲೇ ಗ್ರಾಮದಲ್ಲಿ ಸಂಚರಿಸಿ ಭಯದ ವಾತಾವರಣ ಸೃಷ್ಟಿಸಿದ ಬಗ್ಗೆ ಎರಡು ದಿನಗಳ ಹಿಂದೆ ಗ್ರಾಮಸ್ಥರು ಇಲ್ಲಿನ ವಿಭಾಗ ಅರಣ್ಯ ಕಚೇರಿಗೆ ದೂರು ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.