ವೀರಾಜಪೇಟೆ, ಜು.2: ನಿನ್ನೆ ರಾತ್ರಿ 9.30ರ ಸಮಯದಲ್ಲಿ ಬಿಟ್ಟಂಗಾಲದ ಆರ್.ಕೆ.ಎಫ್ ಕಲ್ಯಾಣ ಮಂಟಪದಿಂದ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಸೋಮಶೇಖರ್ (55) ಎಂಬವರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರ ಗಾಯ ಉಂಟಾಗಿ ಸ್ಥಳದಲ್ಲಿಯೇ ದುರ್ಮರಣ ಗೊಂಡಿದ್ದಾರೆ.

ಮೃತ ಸೋಮಶೇಖರ್ ಅವರು ಬಾಳೆಲೆ ಬಳಿಯ ಕೊಟ್ಟಗೇರಿ ಗ್ರಾಮದಿಂದ ಬಿ.ಎನ್.ಬಾಲಕೃಷ್ಣ ಅವರ ಜೊತೆಯಲ್ಲಿ ಆರ್.ಕೆ.ಎಫ್ ಕಲ್ಯಾಣ ಮಂಟಪದಲ್ಲಿ ಜರುಗುತ್ತಿದ್ದ ವಿವಾಹದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.

ವೀರಾಜಪೇಟೆಯಿಂದ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದ ಬೈಕ್ ಸೋಮಶೇಖರ್‍ಗೆ ಡಿಕ್ಕಿಯಾದ ತಕ್ಷಣ ಸವಾರ ಬೈಕ್ ಸಹಿತ ತಲೆಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಬೈಕ್ ಸವಾರನ ಶೋಧನೆಯಲ್ಲಿ ತೊಡಗಿದ್ದಾರೆ.