ಕುಶಾಲನಗರ, ಜು. 3: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ರೊಟೇರಿಯನ್ ದಿ.ಸಿ.ಎ. ಮುದ್ದಪ್ಪ ಅವರ ಜ್ಞಾಪಕಾರ್ಥವಾಗಿ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣದ ಉದ್ಘಾಟನೆ ತಾ. 4 ರಂದು (ಇಂದು) ನೆರವೇರಿಸಲಾಗುವದು ಎಂದು ನಿಯೋಜಿತ ರೋಟರಿ ಅಧ್ಯಕ್ಷ ಎನ್.ಜಿ. ಪ್ರಕಾಶ್ ಹೇಳಿದರು.ಇಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸದಸ್ಯರು ಹಾಗೂ ದಾನಿಗಳ ಸಹಕಾರದೊಂದಿಗೆ ರೂ.1.5 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿರವಿ, ಜಿ.ಪಂ.ಸದಸ್ಯೆ ಕೆ.ಆರ್.ಮಂಜುಳಾ, ತಾ.ಪಂ.ಸದಸ್ಯ ಗಣೇಶ್ ಹಾಗೂ ರೋಟರಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಕುಶಾಲನಗರ ರೋಟರಿ ಸಂಸ್ಥೆಯ 2017-18ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂಜೆ 7 ಗಂಟೆಗೆ ರೈತ ಸಹಕಾರ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಗವರ್ನರ್ ಡಾ.ಆರ್.ಎಸ್.ನಾಗರ್ಜುನ್, ಸಹಾಯಕ ಗವರ್ನರ್ ಎನ್. ಮಹೇಶ್ ಕುಮಾರ್, ಅತಿಥಿಗಳಾಗಿ ಪಿ.ಎಸ್. ಮೋಹನ್ ರಾಮ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೃತಕ ಕಾಲು ಜೋಡಣೆ ತಪಾಸಣೆ : ರೋಟರಿ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ಜು.23 ರಂದು ರೋಟರಿ ಸಭಾಂಗಣದಲ್ಲಿ ಬೆಳಿಗ್ಗೆ 9.30 ಗಂಟೆಯಿಂದ 4 ಗಂಟೆವರೆಗೆ ಕೃತಕ ಕಾಲು ಜೋಡಣೆ ತಪಾಸಣೆ ಹಾಗೂ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ನಡೆಯಲಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆ.15 ರಂದು ಕೃತಕ ಕಾಲು ಜೋಡಣೆ ನೆರವೇರಿಸಲಾಗುತ್ತದೆ ಎಂದರು.

ರೋಟರಿ ಸಂಸ್ಥೆ ವತಿಯಿಂದ 2017-18ನೇ ಸಾಲಿನಲ್ಲಿ ರೂ.4 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಸಸಿ ನೆಡುವದು ಹಾಗೂ ನಿತ್ಯಜ್ಯೋತಿ ಯೋಜನೆಯಡಿ ಸೋಲಾರ್ ದೀಪ ಅಳವಡಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಯೋಜನಾಧಿಕಾರಿ ಡಾ.ಹರೀಶ್ ಶೆಟ್ಟಿ ಹೇಳಿದರು.

71 ರೋಟರಿ ಸಂಸ್ಥೆಗಳ ಸಹಕಾರದೊಂದಿಗೆ ಕೊಡಗು, ಚಾಮರಾಜನಗರ, ಮೈಸೂರು ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕದಿಂದ ವಂಚಿತ ಗಿರಿಜನ ಕುಟುಂಬಗಳಿಗೆ ನಿತ್ಯಜ್ಯೋತಿ ಯೋಜನೆಯಡಿ ಸೋಲಾರ್ ದೀಪಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ ಒಂದು ಲಕ್ಷ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಇದರೊಂದಿಗೆ ಸ್ವಚ್ಚಭಾರತ್ ಹಾಗೂ ಮಳೆನೀರು ಸಂಗ್ರಹಣೆಗೆ (ಕುಯ್ಲು) ಹೆಚ್ಚಿನ ಒತ್ತು ನೀಡಲಾಗುವದು ಎಂದರು. ಗೋಷ್ಠಿಯಲ್ಲಿ ರೊಟೇರಿಯನ್ ಎನ್. ಮಹೇಶ್ ಕುಮಾರ್, ಡಾ. ಧರಣೇಂದ್ರ, ರವೀಂದ್ರ ರೈ, ಕ್ರಿಜ್ವಲ್ ಕೋಟ್ಸ್ , ರಂಗಸ್ವಾಮಿ, ಶಾಜಿ ಕೆ.ಶಾರ್ಜ್, ಸಿ.ಬಿ.ಹರೀಶ್ ಇದ್ದರು.