ವರದಿ: ಪಿ.ವಿ.ಪ್ರಭಾಕರ್

ನಾಪೆÇೀಕ್ಲು, ಜು.2 : ಸುತ್ತಲೂ ಸುಂದರವಾದ ಮುಗಿಲೆತ್ತರದ ಬೆಟ್ಟಗಳು, ಎಲ್ಲಿ ನೋಡಿದರೂ ಸಮೃದ್ಧ ಹಸಿರು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುತ್ತಾ ಧುಮುಕುತ್ತಿರುವ ಮನೋಹರವಾದ ಜಲರಾಶಿ, ಹಾಲ್ನೊರೆಯುಕ್ಕಿಸುತ್ತಾ ವೈಯ್ಯಾರದಿಂದ ಹರಿಯುವ ತೊರೆ, ಈ ಭೋರ್ಗರೆತದ ಮೊರೆತದಿಂದಾಗಿ ಸಮೀಪದಲ್ಲಿದ್ದರೂ ಕೂಗಿ ಮಾತನಾಡುವ ಪರಿಸ್ಥಿತಿ.

ಆ ನೀರು ಧುಮುಕುವ ರಭಸದಿಂದ ಮೇಲೇಳುವ ನೊರೆಯ ಹನಿ, ಹನಿ ಇಬ್ಬನಿಯಾಗಿ ಮುಸುಕುವ ವಾತಾವರಣ ವರ್ಣಿಸಲಸಾಧ್ಯ, ಊಹೆಗೂ ನಿಲುಕದ ಚಿತ್ರಣ. ಇದು ಕೊಡಗಿನ ಹೆಸರುವಾಸಿ ಚೇಲಾವರ ಜಲಪಾತದ ದೃಶ್ಯ ಕಾವ್ಯ.

ಮಳೆಗಾಲದಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಈ ಜಲಪಾತಗಳು ಕೊಡಗಿನಲ್ಲಿ ಸುರಿಯುವ ಅಧಿಕ ಮಳೆಯಿಂದ ತುಂಬಿ ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುತ್ತಿರುವದನ್ನು ನೋಡುವದೇ ರೋಮಾಂಚನ.

ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಅಬ್ಬಾ! ಆ ಜಲಧಾರೆಯ ಸೌಂದರ್ಯ ವರ್ಣಾನಾತೀತ. ಸುಮಾರು 80 ಅಡಿ ಅಗಲವಾಗಿ 100 ಅಡಿ ಎತ್ತರದಿಂದ ಧುಮುಕುವ ಜಲಧಾರೆಯನ್ನು ನೋಡುವದೆ ಚೆಂದ.

ತಡಿಯಂಡಮೋಳ್ ಶಿಖರದಿಂದ ಹುಟ್ಟುವ ಈ ಜಲಪಾತ ಬೇಸಗೆಯಲ್ಲಿ ನಿತ್ರಾಣವಾಗಿರುವಂತೆ ಸಣ್ಣಗೆ ಹರಿಯುತ್ತಾ ಮಳೆಗಾಲ ಪ್ರಾರಂಭವಾದೊಡನೆ ದಷ್ಟಪುಷ್ಟವಾಗಿ ತನ್ನ ರಭಸವನ್ನು ಹೆಚ್ಚಿಸಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ಚೆಯ್ಯಂಡಾಣೆ ಮುಖ್ಯ ರಸ್ತೆಯಿಂದ 5 ಕಿ. ಮೀ. ದೂರದ ಚೇಲಾವರ ಗ್ರಾಮದಲ್ಲಿ ಭೋರ್ಗರೆಯುತ್ತಾ ಧುಮುಕುತ್ತಾ ತನ್ನದೇ ಆದ ವೈಶಿಷ್ಟ್ಯದಿಂದ ಸಾಗುವ ಈ ಜಲರಾಶಿಯ ಸ್ಥಳಕ್ಕೆ ಚೆಯ್ಯಂಡಾಣೆಯಿಂದ ವಾಹನಗಳಲ್ಲಿ ಕ್ರಮಿಸಿದರೂ ಸ್ವಲ್ಪ ಹಾದಿ ಮಾತ್ರ ಕೊರಕಲು ದಿಣ್ಣೆಗಳಿಂದ ಕೂಡಿದೆ. ನಿತ್ಯ ಹರಿದ್ವರ್ಣದ ದಟ್ಟವಾದ ಕಾಡುಗಳಿಂದಾವೃತವಾದ ತೂಂಗ್ ಕೊಲ್ಲಿ ಎಂಬಲ್ಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯಲ್ಲಿ ರುದ್ರ ರಮಣೀಯ ಸೋಮನ ಜಲಪಾತದ ದರ್ಶನವಾಗುತ್ತದೆ. ಈ ಜಲಧಾರೆ ಹರಿದು ಬರುವ ಬಂಡೆಗಳು ನೋಟಕ್ಕೆ ಆಮೆಯ ಬೆನ್ನಿನಂತೆ ಕಾಣುವದರಿಂದ ಇದನ್ನು ಆಮೆಪಾರೆ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಥಳಿಯರು.

ಈ ಜಲಪಾತದ ಸೌಂದರ್ಯಕ್ಕೆ ಮಾರು ಹೋದ ಪ್ರವಾಸಿಗರು ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಮಳೆಗಾಲದಲ್ಲಿ ಭೇಟಿ ನೀಡುತ್ತಿರುವವರಲ್ಲಿ ಯುವ ಮಂದಿಯೇ ಹೆಚ್ಚು ಎನ್ನುತ್ತಿದ್ದಾರೆ ಸ್ಥಳೀಯ ಜನ. ಬಿರುಸಿನ ಮಳೆ, ಕೊರೆವ ಚಳಿಯನ್ನು ಲೆಕ್ಕಿಸದೆ ಪ್ರವಾಸಿಗರು ಇಲ್ಲಿ ಜಲ ಕ್ರೀಡೆಯಾಡುತ್ತಿರುವದು ಹೆಚ್ಚಿಗೆ ಕಂಡುಬರುತ್ತಿದೆ.

ಜಲಪಾತ ಅದ್ಭುತವಾಗಿದೆ. ಆದರೆ ಪ್ರವಾಸಿಗರಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪ್ರವಾಸೋಧ್ಯಮ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವದು ಎಂದು ಕುಂಡ್ಯೋಳಂಡ ಸಂಪತ್ ಅಭಿಪ್ರಾಯಸಿದ್ದಾರೆ.