ಆಲೂರುಸಿದ್ದಾಪುರ/ಒಡೆಯನಪುರ, ಜು, 6: ಮಿತಿಮೀರಿದ ಕಾಡಾನೆ ಹಾವಳಿ ಹಿತ್ತಲಕೇರಿ, ಎಳನೀರುಗುಂಡಿ, ಮುಳ್ಳೂರು, ರಾಮೇನಹಳ್ಳಿ, ನಂದಿಗುಂದ, ಹೊನ್ನೇಕೊಪ್ಪಲು, ಚೌಡೇನಹಳ್ಳಿ, ಗೊಪಾಲಪುರ, ಮಾದೇಗೋಡು ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಇದೀಗತಾನೆ ಭತÀ್ತದ ಬೀಜಗಳನ್ನು ಬಿತ್ತನೆ ಮಾಡಿರುವ ರೈತರ ಗದ್ದೆಗಳಿಗೆ ಕಳೆದ 20 ದಿನಗಳಿಂದ ನಿರಂತರವಾಗಿ ಕಾಡಾನೆಗಳು ಬರುತ್ತಿದ್ದು, ಇದೀಗ ತಾನೆ ಮೊಳಕೆ ಒಡೆಯುತ್ತಿರುವ ಪೈರುಗಳನ್ನು ತುಳಿಯುತ್ತಿದ್ದು ಮರಿಯಾನೆ ಸಹಿತ ಸುಮಾರು 5 ಆನೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮರಿಯಾನೆ ಹೋದಲ್ಲೇ ಈ ದೊಡ್ಡ ಆನೆಗಳು ಹೋಗುತ್ತಿದ್ದು, ಕಾಫಿ ತೋಟದಲ್ಲಿ ಸಿಗುವಂತಹ ಬಾಳೆ, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ತುಳಿದು ಧ್ವಂಸ ಮಾಡುತ್ತಿದೆ ಎಂದು ಗ್ರಾಮಸ್ಥರು ಗಮನ ಸೆಳೆದಿದ್ದಾರೆ.

ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಬಾರದ ರೀತಿಯಲ್ಲಿ ಅರಣ್ಯದಂಚಿನಲ್ಲಿ ಕಂದಕಗಳನ್ನು ಮಾಡಿದ್ದರೂ ಸಹ, ಇವುಗಳನ್ನು ದಾಟಿ ಬರುತ್ತಿದ್ದು ಇಲ್ಲಿಯ ಕಾಫಿ ತೋಟದ ಸುತ್ತ ದೊಡ್ಡ ಮರದ ದಿಮ್ಮಿಗಳಿಗೆ ಬೆಂಕಿ ಹಾಕುವ ಮೂಲಕ ಹಾಗೂ ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಕಾಡಾನೆಗಳನ್ನು ರೈತರು ಅಟ್ಟುತ್ತಿದ್ದರೂ ಕೂಡ ಮತ್ತೆ ತಪ್ಪಿಸಿ ನಾಡಿನತ್ತ ಬರುತ್ತಿವೆÉ. ಈಗಾಗಲೇ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸಹ ಯಾವದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ವ್ಯಾಪ್ತಿಯ ಗ್ರಾಮಸ್ಥರು. ಇದೀಗ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಹಾಗೂ ಸಚಿವರೀಗೆ ಪತ್ರ ಕಳುಹಿಸಲು ತೀರ್ಮಾನಿಸಿದ್ದಾರೆ.