ಸೋಮವಾರಪೇಟೆ, ಜು. 5: ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ನಗರಳ್ಳಿ, ಕೂತಿ, ಕುಂದಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಕಳೆದ 5 ವರ್ಷಗಳಿಂದ ಕಾಡಾನೆಗಳು ಗ್ರಾಮಗಳನ್ನು ತೊರೆಯುತ್ತಿಲ್ಲ. ಹಾಡಹಗಲೇ ರಸ್ತೆಯಲ್ಲಿ ಸಂಚರಿಸುತ್ತವೆ. ಕೃಷಿ ನಷ್ಟಪಡಿಸುತ್ತಿವೆ. ಹಗಲಿನ ವೇಳೆಯಲ್ಲಿ ಕೃಷಿ ಕೆಲಸ ಮಾಡಲು ಭಯವಾಗುತ್ತಿದೆ ಎಂದು ಗ್ರಾಮಸ್ಥರು ಆರ್‍ಎಫ್‍ಓ ಮೊಹಸ್ಸೀನ್ ಭಾಷ ಅವರೊಂದಿಗೆ ತಮ್ಮ ಅಳಲು ತೋಡಿಕೊಂಡರು.

ಹಸಿಮೆಣಸು, ಬಾಳೆ, ಭತ್ತದ ಸಸಿಮಡಿ ಎಲ್ಲವನ್ನು ಕಾಡಾನೆಗಳು ನಾಶಪಡಿಸುತ್ತಿವೆ. ಕಳೆದ ವರ್ಷ ಪರಿಹಾರಕ್ಕೆ ಅರ್ಜಿಕೊಡಲಾಗಿದೆ. ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ನಗರಳ್ಳಿ ದೇವಮ್ಮ ಹೇಳಿದರು.

ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಲಾಗುತ್ತಿದೆ. ಯಸಳೂರು ವ್ಯಾಪ್ತಿಯಲ್ಲಿ ಟ್ರಂಚ್ ಹಾಗೂ ಸೋಲಾರ್ ತಂತಿ ಬೇಲಿ ಇಲ್ಲದ ಕಾರಣ, ವಾಪಾಸ್ಸು ಗ್ರಾಮದ ಕಡೆಗೆ ಬರುತ್ತಿವೆ ಎಂದು ಆರ್‍ಎಫ್‍ಓ ಹೇಳಿದರು. ಪುಂಡಾನೆಯೊಂದನ್ನು ಸೆರೆಹಿಡಿಯಲು ಗ್ರಾಮಸ್ಥರು ಕೇಳಿಕೊಂಡಿದ್ದು, ಪುಂಡಾನೆಯ ಚಲನವಲನ ಬಗ್ಗೆ ನಿಗಾ ಇಡಲಾಗಿದೆ ಎಂದು ಹೇಳಿದರು. ಸೋಮವಾರಪೇಟೆ ಪ್ರಾದೇಶಿಕ ವಲಯದಲ್ಲಿ ಕಳೆದ ವರ್ಷ 29 ಲಕ್ಷ ರೂ.ಗಳ ಪರಿಹಾರದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಮುಖಂಡರಾದ ಎನ್.ಡಿ. ರಾಜು, ಜಿ.ಆರ್. ಸುರೇಶ್, ಎನ್.ಕೆ. ಪ್ರಕಾಶ್, ಕೆ.ಸಿ. ಉದಯ್, ಬಿ.ಎಂ. ಗಣೇಶ್, ಡಿ.ಎಸ್. ಸೋಮಶೇಖರ್, ಎಸ್.ಪಿ. ಈರಪ್ಪ, ಪಾಪಯ್ಯ, ಕೆ.ಎಲ್. ಲೋಕೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.