ಮಡಿಕೇರಿ, ಜು.5 : ಕಾವೇರಿ ನದಿ ದಡದ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ‘ರ್ಯಾಫ್ಟಿಂಗ್’ ನಡೆಸಲು ಜಿಲ್ಲಾಡಳಿತ ಟೆಂಡರ್ ಕರೆದಿದೆ ಎಂದು ಆರೋಪಿಸಿರುವ ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಎಲ್.ವಿಶ್ವ ಮುಂದಿನ ಎರಡು ದಿನಗಳ ಒಳಗಾಗಿ ಟೆಂಡರ್ ಸ್ಥಗಿತಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮತ್ತು ಕಾನೂನಾತ್ಮಕ ಹೋರಾಟ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬಾರೆಯಲ್ಲಿ 16 ಮಂದಿ 60 ರ್ಯಾಫ್ಟರ್‍ಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಈ ರಿವರ್ ರ್ಯಾಫ್ಟಿಂಗ್ ಅನ್ನು ನಂಬಿಕೊಂಡು 150 ಬಡಕುಟುಂಬಗಳು ಬದುಕು ನಡೆಸುತ್ತಿವೆ. ಇದೀಗ ಈ ಎಲ್ಲ ಕುಟುಂಬಗಳ ಬದುಕಿಗೆ ಸಂಕಷ್ಟವನ್ನು ತಂದೊಡ್ಡುವಂತೆ ಜಿಲ್ಲಾಡಳಿತ ರ್ಯಾಫ್ಟ್ಟಿಂಗ್ ನಡೆಸುವದಕ್ಕೆ ಬಹಿರಂಗ ಟೆಂಡರ್ ಕರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದುಬಾರೆಯ ಕಾಲ್ನಡಿಗೆ ಹಾದಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲು ಅಗತ್ಯವಾದ ಜಾಗವನ್ನು ಅಲ್ಲಿನ ನಿವಾಸಿಗಳು ಒದಗಿಸಿ ನೆರವು ನೀಡಿದ್ದಾರೆ. ಸ್ಥಳೀಯರೇ ರ್ಯಾಫ್ಟ್ಟಿಂಗ್‍ಗಳನ್ನು ನಡೆಸುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೀಗ ಬಹಿರಂಗ ಟೆಂಡರ್ ಮೂಲಕ ರ್ಯಾಫ್ಟಿಂಗ್ ನಡೆಸಲು ಮುಂದಾಗಿರುವ ದರಿಂದ ಸ್ಥಳೀಯರ ಪಾಲಿಗೆ ಸಂಕಷ್ಟ ಎದುರಾಗಿದೆ.

ಪ್ರಸ್ತುತ ದುಬಾರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ರ್ಯಾಫ್ಟರ್‍ಗಳಿಗೆ ಸಂಬಂಧಿಸಿದಂತೆ ಅಗತ್ಯ ಎಲ್ಲಾ ಅನುಮತಿಗಳನ್ನು ಪಡೆದು ಕೊಂಡಿರುವದಲ್ಲದೆ, ಇರುವ 60 ರ್ಯಾಫ್ಟರ್‍ಗಳಿಗೆ ಸಂಬಂಧಿಸಿದಂತೆ ಮಾಸಿಕ ತಲಾ 600 ರೂ.ಗಳಂತೆ 36 ಸಾವಿರ ರೂ.ಗಳನ್ನು ಪಾವತಿಸುತ್ತಿರುವ ದಲ್ಲದೆ, ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ 60 ಗೈಡ್‍ಗಳು, ರಕ್ಷಣಾ ಸಿಬ್ಬಂದಿಗಳನ್ನು ನಾವು ನಿಯುಕ್ತಿಗೊಳಿಸಿ ಕ್ರಮ ಬದ್ಧವಾಗಿ ರ್ಯಾಫ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹೊರಗಿನವರಿಗೆ ರ್ಯಾಫ್ಟಿಂಗ್ ನಡೆಸಲು ಅನುವು ಮಾಡಿಕೊಡುವ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವದೆಂದು ಸಿ.ಎಲ್. ವಿಶ್ವ ತಿಳಿಸಿದರು.

ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಾವಾಜಿ ದಾಮೋದರ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಲಭ್ಯವಿದ್ದರೂ, ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುವ ದುಬಾರೆಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಲ್ಲ. ಇದರ ಬದಲಾಗಿ ರಿವರ್ ರ್ಯಾಫ್ಟಿಂಗ್ ನಡೆಸುವ ಸ್ಥಳೀಯರಿಗೆ ತೊಂದರೆಯನ್ನು ತಂದೊಡ್ಡುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ರ್ಯಾಫ್ಟಿಂಗ್‍ಗೆ ಕರೆಯಲಾಗಿರುವ ಟೆಂಡರ್‍ನಲ್ಲಿ ಸೂಚಿಸಿರುವ ದಾಖಲಾತಿಗಳನ್ನು ಒದಗಿಸಲು ರ್ಯಾಫ್ಟಿಂಗ್ ನಡೆಸುತ್ತಿರುವ ಸ್ಥಳೀಯರಿಗೆ ಒಂದು ವರ್ಷದ ಕಾಲಾವಧಿಯನ್ನು ನೀಡಬೇಕು. ಇಲ್ಲವಾದಲ್ಲಿ ಕಾನೂನಿನ ಮೊರೆ ಹೋಗುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಶಿವರಾಂ, ತಳೂರು ಚೇತನ್ ಹಾಗೂ ಕೆ.ಜಿ.ನವೀನ್ ಉಪಸ್ಥಿತರಿದ್ದರು.