ಮಡಿಕೇರಿ, ಜು. 8: ಭವಿಷ್ಯದಲ್ಲಿ ಇಡೀ ಜಗತ್ತಿನಲ್ಲಿಯೇ ವಾಯುಮಾಲಿನ್ಯ, ಜಲಕೊರತೆಯಂತಹ ದುರಂತಗಳು ಸಂಭವಿಸುವ ಸಾಧ್ಯತೆಗಳಿದ್ದು ಇದನ್ನು ತಡೆಗಟ್ಟಲು ನಿಸರ್ಗ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೋರ್ವರು ಜಾಗೃತರಾಗಿ ಕಾರ್ಯಯೋಜನೆ ರೂಪಿಸುವ ಅನಿವಾರ್ಯತೆ ಇದೆ ಎಂದು ರೋಟರಿ ಜಿಲ್ಲೆ 3181 ನ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಹೇಳಿದರು. ಮಡಿಕೇರಿ ರೋಟರಿ ಕ್ಲಬ್ ನ 67ನೇ ಅಧ್ಯಕ್ಷರಾಗಿ ಪಿ.ಯು. ಪ್ರೀತಮ್ ಮತ್ತು ಕಾರ್ಯದರ್ಶಿಯಾಗಿ ರತನ್ ಕಾರ್ಯಪ್ಪ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ರೋಟರಿ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ, ನಿಸರ್ಗ ಸಂರಕ್ಷಣೆ ಇಂದಿನ ಅನಿವಾರ್ಯತೆಯಾಗಿದ್ದು, ಪ್ರತಿಯೋರ್ವ ವ್ಯಕ್ತಿಯ ಗಾಳಿ ಸೇವನೆಗೂ ಕೋಟ್ಯಾಂತರ ರೂಪಾಯಿ ಮೌಲ್ಯ ವೆಚ್ಚವಾಗುವಂಥ ಸ್ಥಿತಿ ಬಂದೊದಗಲಿದೆ. ಇಂಥ ಅಪಾಯ ತಡೆಯುವ ನಿಟ್ಟಿನಲ್ಲಿ ಈಗಲೇ ಜಾಗೃತ ರಾಗುವದು ಸೂಕ್ತ. ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ ಈ ಬಾರಿ ಪರಿಸರ ರಕ್ಷಣೆಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಲ್ಕು ಕಂದಾಯ ಜಿಲ್ಲೆಗಳನ್ನು ಹೊಂದಿರುವ ರೋಟರಿ ಜಿಲ್ಲೆಯಲ್ಲಿ ಮುಂದಿನ 1 ವರ್ಷದಲ್ಲಿ 1 ಲಕ್ಷ ಸಸಿಗಳನ್ನು ರೋಟರಿ ಸದಸ್ಯರು ನೆಡುವ ಮೂಲಕ ವೃಕ್ಷಾಂದೋಲನಕ್ಕೆ ಮುಂದಾಗಲಿದ್ದಾರೆ ಎಂದು ತಿಳಿಸಿದರು. ದೇವರು ನೀಡಿರುವ ಪ್ರಾಕೃತಿಕ ಕೊಡುಗೆಗೆ ಉಪಕಾರವೆಂಬಂತೆ ನಾವೂ ನಿಸರ್ಗಕ್ಕೆ ಏನಾದರು ಮಹತ್ವದ್ದನ್ನು ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ಯುವಪೀಳಿಗೆ ಮೂಲಕ ರೋಟರಿ ಕ್ಲಬ್‍ಗಳು ಸಾವಿರಾರು ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಿದೆ ಎಂದು ಸುರೇಶ್ ಚಂಗಪ್ಪ ತಿಳಿಸಿದರು.

(ಮೊದಲ ಪುಟದಿಂದ) ಜಿಲ್ಲಾ ಸಹಾಯಕ ಗವರ್ನರ್ ಮಹೇಶ್ ನಲ್ವಾಡೆ ಕ್ಲಬ್‍ನ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ. ನಿತ್ಯಜ್ಯೋತಿ ಯೋಜನೆಯ ಮೂಲಕ ರೋಟರಿ ಜಿಲ್ಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 1700 ಫಲಾನುಭವಿಗಳಿಗೆ ದೀಪ ನೀಡುವ ಗುರಿ ಹೊಂದಲಾಗಿದೆ. ಸ್ವಚ್ಛ ಭಾರತ್ ಯೋಜನೆಯಲ್ಲಿಯೂ ರೋಟರಿ ಕಾರ್ಯಪ್ರವೃತ್ತವಾಗಲಿದೆ ಎಂದು ಮಾಹಿತಿ ನೀಡಿದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ ಮಾತನಾಡಿ, ದೇಶದಲ್ಲಿಯೇ ಹಿರಿಯ ರೋಟರಿ ಕ್ಲಬ್‍ಗಳಲ್ಲಿ ಒಂದಾಗಿ ಖ್ಯಾತಿಪಡೆದಿರುವ ಮಡಿಕೇರಿ ರೋಟರಿ ಅನೇಕ ಹೊಸ ಕ್ಲಬ್‍ಗಳಿಗೆ ಮಾರ್ಗದರ್ಶಕ ಕ್ಲಬ್‍ನಂತಿದೆ ಎಂದು ಶ್ಲಾಘಿಸಿದರು.

ರೋಟರಿ ಕ್ಲಬ್ ನಿರ್ಗಮಿತ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ರೋಟರಿ ಕ್ಲಬ್ ಮೂಲಕ ವರ್ಷಪೂರ್ತಿ ಹಮ್ಮಿಕೊಂಡ ವಿವಿಧ ಯೋಜನೆಗಳು ಯಶಸ್ವಿಯಾಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ನಿರ್ಗಮಿತ ಕಾರ್ಯದರ್ಶಿ ಸಲೀಲಾ ಪಾಟ್ಕರ್ ಕ್ಲಬ್‍ನ ವಾರ್ಷಿಕ ವರದಿ ಮಂಡಿಸಿದರು.

ಇದೇ ಸಂದರ್ಭ ಡಾ. ರವಿಕರುಂಬಯ್ಯ ಅವರನ್ನು ಹೊಸ ಸದಸ್ಯರನ್ನಾಗಿ ಮಡಿಕೇರಿ ರೋಟರಿಗೆ ಸೇರ್ಪಡೆಗೊಳಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ರೋಟರಿ ಕ್ಲಬ್‍ನ ನೂತನ ಕಾರ್ಯದರ್ಶಿ ರತನ್ ತಮ್ಮಯ್ಯ ವಂದಿಸಿದ ಕಾರ್ಯಕ್ರಮದಲ್ಲಿ ಎಂ. ಈಶ್ವರ ಭಟ್, ಕೆ.ಎಂ. ಕರುಂಬಯ್ಯ, ಚೀಯಣ್ಣ, ಅಮರ್ ಶರ್ಮಾ, ಅನಿಲ್ ಕೃಷ್ಣಾನಿ ನಿರೂಪಿಸಿದರು. ಜಿಲ್ಲೆಯ ವಿವಿಧ ರೋಟರಿ ಕ್ಲಬ್‍ಗಳ ಸದಸ್ಯರು ಹಾಜರಿದ್ದರು.