ಚೆಟ್ಟಳ್ಳಿ, ಜು. 10: ಕೊಡಗಿನಲ್ಲಿ ಭತ್ತ ಬೆಳೆಯುವದೇ ಮುಖ್ಯ ಬೇಸಾಯವಾಗಿತ್ತು. ಕಾಲ ಕ್ರಮೇಣ ಕಾಫಿಯು ತನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಜನರಲ್ಲಿ ಆಸೆಯನ್ನು ಮೂಡಿಸಿ ಉಪ ಬೆಳೆಯಿಂದ ಮುಖ್ಯ ಬೆಳೆಗೆ ಪ್ರವೇಶವನ್ನು ಪಡೆಯಿತು. ಆದರೂ ಜನರು ತಮ್ಮ ಗದ್ದೆಗಳನ್ನು ತೋಟಕ್ಕೆ ಪರಿವರ್ತಿಸದೆ ಪ್ರತಿವರ್ಷ ಭತ್ತದ ಕೃಷಿ ಮಾಡುತ್ತಿದ್ದರು.

ಆದರೆ ಕ್ರಮೇಣ ಸರಕಾರದ ನೀತಿ ನಿಯಮದಿಂದ ವನ್ಯ ಪ್ರಾಣಿಗಳಾದ ಕಾಡು ಹಂದಿ, ಜಿಂಕೆ, ಪಕ್ಷಿ, ಕೊನೆಗೆ ಆನೆಯಂತಹ ದೊಡ್ಡ ಮಟ್ಟದ ಪ್ರಾಣಿಗಳಿಗೆ ಬೆಳೆ ಆಹುತಿಯಾಗತೊಡಗಿತು. ಕೊನೆಗೆ ತಮ್ಮ ಮನೆಯವರ ಹೊಟ್ಟೆಯನ್ನು ಹೊರೆಯುವದು ಹೋಗಲಿ, ಗದ್ದೆಗೆ ಹೂಡಿದ ಬಂಡವಾಳವೇ ದೊರಕದೆ ಅಲ್ಲಿಗೆ ಹಲವಾರು ಮಂದಿ ರೈತರು ಗದ್ದೆ ನಾಟಿ ಮಾಡುವದನ್ನು ಬಿಟ್ಟು ತೋಟದ ಕಡೆಗೋ ಅಥವ ಬೆಂಗಳೂರಿನ ಕಡೆಗೆ ಮುಖ ಮಾಡತೊಡಗಿದರು. ಅಲ್ಲಿಗೆ ಇದು ಮುಗಿಯಲಿಲ್ಲ. ಕೆಲವು ರೈತರು ಸ್ವಾಭಿಮಾನದಿಂದ ತಮ್ಮ ಗದ್ದೆಯಲ್ಲಿ ಬೆಳೆದ ಭತ್ತವನ್ನು ಆನೆ ಮತ್ತು ಇತರ ವನ್ಯಜೀವಿಗಳನ್ನು ರಾತ್ರಿ ಹಗಲು ಕಾವಲು ಕಾಯುತ್ತ ಓಡಿಸಿ ಅವುಗಳು ತಿಂದು ಉಳಿಸಿದ ಭತ್ತವನ್ನು ತಂದು ಉಪಯೋಗಿಸುತ್ತಿದ್ದರು. ಆದರೆ ಈಗ ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಹಾವಳಿ ಆರಂಭವಾಗಿದೆ. ಇದುವರೆಗೂ ಕೊಡಗಿನಲ್ಲಿ ಕಾಣದ ಈ ಪಕ್ಷಿಯು ಗುಂಪಾಗಿ ಇತರ ಪಕ್ಷಿಗಳ ಜತೆಯಲ್ಲಿ ಗದ್ದೆಗೆ ಧಾಳಿಯಿಡಲು ಪ್ರಾರಂಭಿಸಿವೆ. ಸಣ್ಣಮಟ್ಟದ ಪಕ್ಷಿಗಳನ್ನು ಹೇಗಾದರೂ ನಿಯಂತ್ರಿಸಬಹುದು. ಆದರೆ ಎಂಟರಿಂದ ಹತ್ತು ಕೆ.ಜಿ. ತೂಗುವ ಈ ಪಕ್ಷಿಯನ್ನು ನಿಯಂತ್ರಿಸಲು ಹೋಗಿ ಹೆಚ್ಚು-ಕಡಿಮೆಯಾದರೆ ಜಾಮೀನೇ ಇಲ್ಲದೆ ಜೈಲು ಗ್ಯಾರೆಂಟಿ ಎನ್ನುವದು ರೈತರ ಅಳಲು.

- ಪುತ್ತರಿರ ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ.