ಸುಂಟಿಕೊಪ್ಪ, ಜು. 9 : 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಮಾನಸಿಕ ಒತ್ತಡ ಅಧಿಕವಾಗುತ್ತಿದ್ದು, ಆರೋಗ್ಯ ಕಾಪಾಡಿಕೊಳ್ಳುವದಕ್ಕಾಗಿ ಪೊಲೀಸರು ಆಯ್ದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಹೇಳಿದರು.

ಇಲ್ಲಿನ ಸಂತ ಮೇರಿ ಸಭಾಂಗಣದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯಿಂದ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕುಟುಂಬ ವರ್ಗದ ಸಂತೋಷಕೂಟ 2017ನ್ನು ಉದ್ಘಾಟಿಸಿ ಮಾತನಾಡಿದ ಎಸ್ಪಿ ರಾಜೇಂದ್ರಪ್ರಸಾದ್ ಸಾರ್ವಜನಿಕರು ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಬೇಕು ಪೊಲೀಸ್ ಸಿಬ್ಬಂದಿಯ ಕುಟುಂಬದವರು ಸಹ ಕರ್ತವ್ಯದ ವಾಸ್ತವಿಕ ಸ್ಥಿತಿಯನ್ನು ಆರಿತು ಅನ್ಯೋನತೆಯಿಂದ ಜೀವನ ನಡೆಸಲು ಸಹಕರಿಸಬೇಕೆಂದರು.

ಸೊಮವಾರಪೇಟೆ ತಾಲೂಕು ಡಿವೈಎಸ್‍ಪಿ ಸಂಪತ್‍ಕುಮಾರ್ ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ, ಮಡಿಕೇರಿ ಡಿಸಿಐಬಿ ವೃತ್ತನಿರೀಕ್ಷಕರಾದ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತೋಷಕೂಟದ ಹಿನ್ನಲೆ ಪೊಲೀಸ್ ಸಿಬ್ಬಂದಿಗಳಿಗೆ, ಪತ್ನಿ ಹಾಗೂ ಮಕ್ಕಳಿಗೆ ನಡೆದ ವಿವಿಧ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನವನ್ನು ರಾಜೇಂದ್ರಪ್ರಸಾದ್ ವಿತರಿಸಿದರು.